ತರೀಕೆರೆ: ಉಡೇವಾ ಗ್ರಾಮದ ಮರೆಕಲ್ಲಳ್ಳಿ ಶ್ರೀರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವವು ಬ್ರಹ್ಮ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ಬ್ರಹ್ಮ ರಥೋತ್ಸವಕ್ಕೂ ಮುನ್ನ 101 ಎಡೆ ಸೇವೆ ಮಾಡಲಾಯಿತು. ಬಳಿಕ, ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಆಕಾಶದಲ್ಲಿ ಹಾರಾಡಿದ ಗರುಡ ಪಕ್ಷಿಯನ್ನು ಕಂಡ ಭಕ್ತರು ಮರೆಕಲ್ಲಳ್ಳಿ ರಂಗನಾಥ ಸ್ವಾಮಿಗೆ ಜೈಕಾರ ಹಾಕುತ್ತಾ ಬ್ರಹ್ಮರಥ ಎಳೆದರು.
ಉಡೇವಾ, ಲಿಂಗದಹಳ್ಳಿ, ಯರದಂಕಲು, ಗಂಗೂರು, ಕಾಮನದುರ್ಗ ಗ್ರಾಮಗಳ ಭಕ್ತಾದಿಗಳು, ಶ್ರೀರಂಗನಾಥ ಸ್ವಾಮಿಯ ರಥಕ್ಕೆ ದವಸ ಧಾನ್ಯ, ಬಾಳೆ ಹಣ್ಣು, ಹೂವು ಮುಂತಾದ ಮಂಗಳ ದ್ರವ್ಯಗಳನ್ನು ಎಸೆಯುವ ಮೂಲಕ ಹರಕೆ ತೀರಿಸಿದರು.
ಉಡೇವಾ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಪಾನಕದ ಬಂಡಿಗಳನ್ನು ತಂದು ರಥಕ್ಕೆ 3 ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ತಮ್ಮ ಹರಕೆ ತೀರಿಸಿ ಬಳಿಕ ಭಕ್ತಾದಿಗಳಿಗೆ ಬೆಲ್ಲದ ಪಾನಕ, ಕೋಸಂಬರಿ ವಿತರಿಸಿದರು.
ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ತಮ್ಮಯ್ಯ, ಉಡೇವಾ ಗ್ರಾ.ಪಂ. ಅಧ್ಯಕ್ಷೆ ಭಾರತಿ ಸಿ. ರಾಜಪ್ಪ, ತಾ.ಪಂ. ಮಾಜಿ ಸದಸ್ಯ ಎಸ್.ಎ. ಕೃಷ್ಣಪ್ಪ ಅವರು, ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.