ADVERTISEMENT

ವಾರ್ಡ್‌ ಹದಿನೆಂಟು: ಸಮಸ್ಯೆ ನೂರೆಂಟು

ತರೀಕೆರೆ ಪುರಸಭೆ: ಅಭಿವೃದ್ಧಿ ಕಾಣದ ಬಡಾವಣೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 11:31 IST
Last Updated 7 ನವೆಂಬರ್ 2022, 11:31 IST
ತರೀಕೆರೆ ಪಟ್ಟಣದ 18ನೇ ವಾರ್ಡ್‌ನಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯ ಬದಿಯಲ್ಲಿ ಕೊಳಚೆ ನೀರು
ತರೀಕೆರೆ ಪಟ್ಟಣದ 18ನೇ ವಾರ್ಡ್‌ನಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯ ಬದಿಯಲ್ಲಿ ಕೊಳಚೆ ನೀರು   

ತರೀಕೆರೆ: ಪಟ್ಟಣದ 18ನೇ ವಾರ್ಡ್‌ ಸಮಸ್ಯೆಗಳ ಸಾಗರವಾಗಿದೆ. ಇಲ್ಲಿ ರಸ್ತೆ, ದಾರಿದೀಪ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಇದೆ. ಸ್ವಚ್ಛತೆಯೇ ಇಲ್ಲಿ ಮರೀಚಿಕೆ.

ವಾರ್ಡ್‌ನಲ್ಲಿ ರಾಜ್ಯ ಹೆದ್ದಾರಿ ಹಾದು ಹೋಗಿದ್ದು, ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲ. ರಸ್ತೆ ಬದಿಯ ಹೋಟೆಲ್, ಡಾಬಾಗಳ ಕೊಳಚೆ ನೀರು ರಾಜ ಕಾಲುವೆ ಸೇರಲೂ ಸಮರ್ಪಕ ಚರಂಡಿಯಿಲ್ಲ. ಕೊಳಚೆ ಚರಂಡಿಯಲ್ಲಿ ನಿಂತು ದುರ್ನಾತ ಬೀರುತ್ತದೆ. ನಾಗರಿಕರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ. ಇಲ್ಲಿ ಸಾಂಕ್ರಾಮಿಕ ರೋಗದ ಭೀತಿಯೂ ಕಾಡತೊಡಗಿದೆ.

‘ರಾಜಕಾಲುವೆ ಸಂಪರ್ಕಕ್ಕೆ ಚರಂಡಿ ನಿರ್ಮಿಸಬೇಕು ಎಂದು ಪುರಸಭೆಗೆ ಹಲವು ಬಾರಿ ದೂರು ನೀಡಿದ್ದರೂ, ಕ್ರಮ ವಹಿಸುತ್ತಿಲ್ಲ’ ಎನ್ನುತ್ತಾರೆ ನಿವಾಸಿ ನಾರಾಯಣಪ್ಪ.

ADVERTISEMENT

ಹಂದಿ ಹಾವಳಿ:

ಹಂದಿಗಳ ಹಾವಳಿ ಹೇಳತೀರದಾಗಿದೆ. ಹೋಟೆಲ್, ಬೀದಿ ಬದಿ ವ್ಯಾಪಾರದ ತ್ಯಾಜ್ಯವೇ ಅವುಗಳಿಗೆ ಆಹಾರ. ಅವುಗಳು ಅಡ್ಡಾದಿಡ್ಡಿ ಸಂಚರಿಸುವುದರಿಂದ ಲಿಂಗದಹಳ್ಳಿ ರಸ್ತೆಯಲ್ಲಿ ದ್ವಿಚಕ್ರ ಸಂಚಾರಕ್ಕೆ ಸಂಚಕಾರವಾಗಿದೆ.

ಸಿದೇಶ್ವರ ಬಡಾವಣೆಯಲ್ಲಿ ಸಿ.ಸಿ ರಸ್ತೆ ಇಲ್ಲ. ಕಚ್ಚಾ ರಸ್ತೆಯಲ್ಲಿನ ಹೊಂಡಗಳ ಮಧ್ಯೆಯೇ ಸರ್ಕಸ್ ಮಾಡಿ ಸಾಗಬೇಕಾಗಿದೆ. ಬೀದಿದೀಪ ಇಲ್ಲದ ಕಾರಣ ಸಂಜೆಯ ಬಳಿಕ ಸಂಚಾರವೇ ದುಸ್ತರವಾಗಿದೆ.

ಗಿರಿ ನಗರದ ಉದ್ಯಾನ ನಿರ್ವಹಣೆ ಇಲ್ಲದೆ ಸೂರಗಿದೆ. ಇದರ ಸುತ್ತ ಗಿಡಗಂಟಿಗಳು, ಪ್ಲಾಸಿಕ್ಟ್ ತ್ಯಾಜ್ಯ ಬಿದ್ದಿದೆ. ಸಮೀಪದಲ್ಲಿ ಪದವಿ ಕಾಲೇಜು ಇದ್ದು, ಪಡ್ಡೆ ಹುಡುಗರ ಆಶ್ರಯ ತಾಣವಾಗಿದೆ ಎನ್ನುತ್ತಾರೆ ಗೃಹಿಣಿ ಶಾಂತಲಾ.

ಗಿರಿನಗರ, ರೇವಣ್ಣಸಿದ್ದೇಶ್ವರ ಬೀದಿ, ಸಿದ್ದೇಶ್ವರ ಬೀದಿಗಳಿಗೆ ನಾಮಫಲಕ ಇಲ್ಲ. ಗಿರಿನಗರದಲ್ಲಿ ಬಿಸಿಎಂ ಹಾಸ್ಟೆಲ್ ಸುತ್ತಲೂ ಮದ್ಯದ ಬಾಟಲ್ ಮತ್ತಿತರ ತ್ಯಾಜ್ಯವೇ ತುಂಬಿದೆ. ಸಮರ್ಪಕ ಚರಂಡಿ ಇಲ್ಲದೇ, ಸೂಳ್ಳೆಗಳ ತಾಣವಾಗಿದೆ.

ಪುರಸಭೆಯ ಕಂದಾಯವನ್ನು ಸರಿಯಾಗಿ ಪಾವತಿಸುತ್ತೇವೆ. ಆದರೆ, ಜಲ್ವಂತ ಸಮಸ್ಯೆಗಳಿಗೆ ಪರಿಹಾರವೇ ಇಲ್ಲದಂತಾಗಿದೆ ಎಂದು ಗಿರಿನಗರದ ಪ್ರಭು ಕುಮಾರ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.