ADVERTISEMENT

ಚಿಕ್ಕಮಗಳೂರು: ಟ್ರಾಮಾ ಕೇರ್‌ ಸೆಂಟರ್‌ ನನೆಗುದಿಗೆ

ವರ್ಷಕ್ಕೆ ಸರಾಸರಿ 6,500 ರಸ್ತೆ ಅಪಘಾತ *ವೈದ್ಯರು, ಸಿಬ್ಬಂದಿ, ಉಪಕರಣ ಕೊರತೆ

ಬಿ.ಜೆ.ಧನ್ಯಪ್ರಸಾದ್
Published 10 ಮಾರ್ಚ್ 2022, 3:09 IST
Last Updated 10 ಮಾರ್ಚ್ 2022, 3:09 IST
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌.ಎನ್‌.ಉಮೇಶ್‌
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌.ಎನ್‌.ಉಮೇಶ್‌   

ಚಿಕ್ಕಮಗಳೂರು: ಸಿಬ್ಬಂದಿ, ಉಪಕರಣಗಳು ಇಲ್ಲದೆ ಟ್ರಾಮಾ ಕೇರ್‌ ಸೆಂಟರ್‌ಗಳು (ಆಘಾತ ಆರೈಕೆ ಕೇಂದ್ರ) ಕಾರ್ಯನಿರ್ವಹಿಸುತ್ತಿಲ್ಲ. ಈ ಕೇಂದ್ರಗಳಲ್ಲಿ ವಾರ್ಡ್‌, ತುರ್ತುಚಿಕಿತ್ಸೆ ವಿಭಾಗ ತೆರೆಯಲಾಗಿದೆ.

ಕಡೂರು, ಮೂಡಿಗೆರೆ, ಬೀರೂರು, ಪಂಚನಹಳ್ಳಿಯಲ್ಲಿ ಟ್ರಾಮ ಸೆಂಟರ್‌ ಇದ್ದೂ ಇಲ್ಲದಂತಾಗಿವೆ. ಕಡೂರು, ಮೂಡಿಗೆರೆ ಕೇಂದ್ರಗಳು ತುರ್ತು ಚಿಕಿತ್ಸಾ ವಿಭಾಗಗಳಾಗಿ, ಬೀರೂರು, ಪಂಚನಹಳ್ಳಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳ ವಾರ್ಡ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಗಳಲ್ಲೂ ಹಲವು ಬಾರಿ ಟ್ರಾಮ ಕೇರ್‌ ಸೆಂಟರ್‌ ಸ್ಥಾಪನೆ ವಿಚಾರ ಪ್ರಸ್ತಾಪವಾಗಿದೆ. ಟ್ರಾಮಾ ಕೇರ್‌ ಕೇಂದ್ರ ಸ್ಥಾಪಿಸಲು ಅರಿವಳಿಕೆ ತಜ್ಞರು, ಕೀಲು–ಮೂಳೆ ತಜ್ಞರು, ಶಸ್ತ್ರಚಿಕಿತ್ಸಕ, ತಂತ್ರಜ್ಞರು, ಸಿಬ್ಬಂದಿ, ಉಪಕರಣಗಳನ್ನು ಒದಗಿಸಬೇಕು. ಸರ್ಕಾರಕ್ಕೆ ಪ್ರಸ್ತಾವವನ್ನೂ ಸಲ್ಲಿಸಲಾಗಿದೆ. ಈವರೆಗೆ ಕ್ರಮ ವಹಿಸಿಲ್ಲ.

ADVERTISEMENT

ಎನ್‌ಎಚ್‌–206 (ಬೆಂಗಳೂರು–ಹೊನ್ನಾವರ), ಎನ್‌ಎಚ್‌–173 (ಕಡೂರು– ಮೂಡಿಗೆರೆ) ಇನ್ನು ಕೆಲವು ಹೆದ್ದಾರಿಗಳು ಹಾದುಹೋಗಿವೆ. ಈ ಹೆದ್ದಾರಿಗಳ ವಿಸ್ತರಣೆ ಕೈಗೆತ್ತಿಕೊಳ್ಳಲಾಗಿದೆ. ಚತುಷ್ಪಥವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಜಿಲ್ಲೆಯು ಪ್ರವಾಸಿ ತಾಣ ಬೀಡು. ಪ್ರೇಕ್ಷಣಿಯ ತಾಣಗಳ ದರ್ಶನಕ್ಕೆ ನಿತ್ಯ ಸಹಸ್ರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯ, ಸಾಲು ರಜೆ ದಿನಗಳಲ್ಲಿ ಪ್ರವಾಸಿಗರ ದಟ್ಟಣೆ ಜಾಸ್ತಿ ಇರುತ್ತದೆ. ಪ್ರವಾಸಿ ತಾಣ ಮಾರ್ಗ, ಹೆದ್ದಾರಿಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚು ಇರುತ್ತದೆ.

ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಹಿಂದಿನ ವರ್ಷಗಳ ಅಂಕಿಅಂಶ ಪ್ರಕಾರ ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 6,500 ರಸ್ತೆ ಅಪಘಾತಗಳು ಸಂಭವಿಸುತ್ತವೆ.

‘ಟ್ರಾಮಾ ಕೇರ್‌ ಸೆಂಟರ್ ಆರಂಭಿಸಿದರೆ ಅಪಘಾತ ಪ್ರಕರಣಗಳಿಗೆ ತ್ವರಿತ, ಪರಿಣಾಮಕಾರಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಸುಸಜ್ಜಿತ ಕೇಂದ್ರ ಆರಂಭಿಸಲು ಅಪಾರ ವೆಚ್ಚ ತಗಲುತ್ತದೆ. ಸರ್ಕಾರದಿಂದ ಅನುದಾನ ಒದಗಿಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು’ ಎಂದು ವೈದ್ಯರೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.