ನರಸಿಂಹರಾಜಪುರ: ರೈತರಿಗೆ ಮಾರಕವಾಗಿರುವ ಪರಿಸರ ಸೂಕ್ಷ್ಮ ವಲಯ, ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಹಿಸುವ ಸೆಕ್ಷನ್ 4(1) ಅಧಿಸೂಚನೆ, ಹುಲಿ ಯೋಜನೆಯ ಬಫರ್ ಜೋನ್, ಕಸ್ತೂರಿರಂಗನ್ ವರದಿ ವಿರೋಧಿಸಿ ಬಾಳೆ ಗ್ರಾಮ ಪಂಚಾಯಿತಿಯ ವಗ್ಗಡೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುನಾವಣಾ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದು, ಸೋಮವಾರ ತಹಶೀಲ್ದಾರ್ ಎಸ್. ರೇಣುಕಾ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಮುಖಂಡ ವಿ.ಕೆ.ಸುಧಾಕರ ಸುದ್ದಿಗಾರರೊಂದಿಗೆ ಮಾತನಾಡಿ, ‘ವಗ್ಗಡೆ ಗ್ರಾಮದಲ್ಲಿ 452 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು 4 (1) ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದ ಜಮೀನು, ಮನೆ ನಿರ್ಮಿಸಿಕೊಂಡಿರುವ ರೈತರು ಬೀದಿಗೆ ಬೀಳುವಂತಾಗಿದೆ. ಈ ಯೋಜನೆಗಳು ರೈತರಿಗೆ ಮರಣ ಶಾಸನವಾಗಿದೆ. ರೈತರು ಪ್ರತಿಭಟನೆ ನಡೆಸಿ, ವಿರೋಧ ವ್ಯಕ್ತಪಡಿಸಿದರೂ ಆಡಳಿತ ನಡೆಸುವ ಸರ್ಕಾರಗಳು ರೈತರೊಂದಿಗೆ ಚರ್ಚೆ ನಡೆಸದೆ ವಾಸ್ತವ ಸಂಗತಿಗೆ ವಿರುದ್ಧವಾಗಿ ರೈತರ ಹಿತಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಈಗಾಗಲೇ ವಗ್ಗಡೆ ಗ್ರಾಮದ ಎಲ್ಲಾ ರೈತರು ಪಕ್ಷ ಭೇದ ಮರೆತು ಚರ್ಚೆ ನಡೆಸಿದ್ದೇವೆ. ವಗ್ಗಡೆ ಕ್ಷೇತ್ರದಲ್ಲಿ 460 ಮತದಾರರಿದ್ದು ಎಲ್ಲರೂ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದೇವೆ’ ಎಂದರು.
ಮುಖಂಡರಾದ ಎಚ್.ಆರ್.ಸುಧಾಕರ, ಬಿ.ಟಿ.ಸತೀಶ, ವಿ.ಪಿ.ಗೋವಿಂದೇಗೌಡ, ರಾಜಕುಮಾರ್, ಬಿ.ಆರ್. ಸಿದ್ದಪ್ಪ, ಎಚ್.ಎಸ್.ವಾಸುದೇವ, ವಿ.ಆರ್.ರಾಮಪ್ಪ, ವಸಂತ, ಮಂಜುನಾಥ, ಕೇಶವ, ರಜಿತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.