ADVERTISEMENT

ಅಗಣಿತ ಗುಣಗಳ ಗಣಿ ವಾಲ್ಮೀಕಿ : ಸಿ.ಟಿ.ರವಿ

ಜಿಲ್ಲೆಯಾದ್ಯಂತ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 7:56 IST
Last Updated 8 ಅಕ್ಟೋಬರ್ 2025, 7:56 IST
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಸಿ.ಟಿ.ರವಿ ಮತ್ತು ಎಚ್.ಡಿ.ತಮ್ಮಯ್ಯ ಪುಷ್ಪ ನಮನ ಸಲ್ಲಿಸಿದರು
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಸಿ.ಟಿ.ರವಿ ಮತ್ತು ಎಚ್.ಡಿ.ತಮ್ಮಯ್ಯ ಪುಷ್ಪ ನಮನ ಸಲ್ಲಿಸಿದರು   

ಚಿಕ್ಕಮಗಳೂರು: ‘ರಾಮ ಹೇಗೆ ಗುಣಗಳ ಗಣಿಯೋ ಹಾಗೆಯೇ ಆ ರಾಮನ ವ್ಯಕ್ತಿತ್ವವನ್ನು ಮರೆಯದಂತೆ ನಮ್ಮ ಹೃದಯದಲ್ಲಿ ಅಚ್ಚಾಗುವಂತೆ ಮಾಡಿರುವ ಮಹರ್ಷಿ ವಾಲ್ಮೀಕಿ ಅವರು ಅಗಣಿತ ಗುಣಗಳ ಗಣಿ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಮಾಯಣ ಮತ್ತು ಮಹಾಭಾರತ ಭಾರತದ ಚಾರಿತ್ರಿಕ ಮಹಾಕಾವ್ಯಗಳು. ರಾಮನ ವ್ಯಕ್ತಿತ್ವ, ಆದರ್ಶ, ರಾಮಾಯಣ ಕಾಲಘಟ್ಟವನ್ನು ಸಾವಿರಾರು ವರ್ಷಗಳ ನಂತರವೂ ನಮ್ಮ ಹೃದಯದಲ್ಲಿ ಉಳಿಯಲು ಮಹರ್ಷಿ ವಾಲ್ಮೀಕಿ ಅವರು ಕಾರಣರು’ ಎಂದು ಹೇಳಿದರು.

ADVERTISEMENT

ಮಹರ್ಷಿ ವಾಲ್ಮೀಕಿ ಅವರು ತಮ್ಮ ಕಾವ್ಯದ ಮೂಲಕ ಸಾಮರಸ್ಯ, ಪ್ರೀತಿ, ತ್ಯಾಗ ಮತ್ತು ಅಭಿವೃದ್ಧಿ ಆಧಾರಿತ ಆಡಳಿತವನ್ನು ಪ್ರಪಂಚದಾದ್ಯಂತ ಹರಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ಭಾರತೀಯ ಸಂಸ್ಕೃತಿಯಲ್ಲಿ ಒಬ್ಬ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿ. ಅವರನ್ನು ಅತ್ಯಂತ ಗೌರವದಿಂದ ಆದಿಕವಿ ಎನ್ನಲಾಗುತ್ತದೆ. ದೇಶದಲ್ಲಿ ರಾಮಾಯಣ, ಮಹಾಭಾರತ ಎಲ್ಲರ ಬದುಕಿಗೆ ಆದರ್ಶದ ಮಹಾ ಕಾವ್ಯಗಳು. ರಾಮಾಯಣ ರಚಿಸಿದ್ದು ವಾಲ್ಮೀಕಿಯಾದರೆ ಮಹಾಭಾರತ ರಚಿಸಿದ್ದು ವೇದವ್ಯಾಸರು. ಈ ಮಹಾನ್ ಗ್ರಂಥಗಳನ್ನು ರಚಿಸಿದ ಇವರಿಬ್ಬರೂ ಶೋಷಿತ ವರ್ಗದಿಂದ ಬಂದವರು ಎಂಬುದು ಹೆಮ್ಮೆಯ ವಿಷಯ’ ಎಂದು ಹೇಳಿದರು.

ಸರ್ಕಾರ ಹಲವು ಯೋಜನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡುತ್ತಿದೆ. ಸಕಾಲದಲ್ಲಿ ಕೆಲ ಯೋಜನೆಗಳು ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ವಾಲ್ಮೀಕಿ ಭವನಕ್ಕೆ ಪೀಠೋಪಕರಣ ಒದಗಿಸಲು ₹10 ಲಕ್ಷ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಶ್ರೀಪತಿ ಹಳಗುಂದ ಅವರು ಮಹರ್ಷಿ ವಾಲ್ಮೀಕಿ ಅವರ ಕುರಿತು ಉಪನ್ಯಾಸ ನೀಡಿ, ‘ರಾಮಾಯಣ ಎಂದರೆ ವಾಲ್ಮೀಕಿ ನೆನಪಾಗುವುದು ಸಹಜ. ವಾಲ್ಮೀಕಿ ಕೆತ್ತಿದ ನೂರಾರು ಪಾತ್ರಗಳಿಗೆ ದೇವರ ಮಂದಿರವಿದೆ, ಗುಡಿ ಗೋಪುರಗಳಿವೆ. ಆದರೆ, ವಾಲ್ಮೀಕಿಗೆ ಮಾತ್ರ ದೇವಾಲಯವಿಲ್ಲ. ಆತ ಕೆತ್ತಿದ ರಾಮ ದೇವನಾದ, ವಾಲ್ಮೀಕಿ ಮಹಾನ್ ದೇವನಾಗಿ ಇಂದು ನಮ್ಮ ಮುಂದಿದ್ದಾರೆ’ ಎಂದರು. 

ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರದ ತಾಲ್ಲೂಕು ಕಚೇರಿಯಿಂದ ಕಲಾಮಂದಿರದ ತನಕ ನಡೆದ ಮೆರವಣಿಗೆ ಗಮನ ಸೆಳೆಯಿತು.

ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಬಿ.ಕೆ.ಭೀಮಪ್ಪ, ಜಿಲ್ಲಾ ವಾಲ್ಮೀಕಿ ಯುವಕ ಸಂಘದ ಜಗದೀಶ್ ಕೋಟೆ, ಜಿ.ಪಂ. ಉಪಕಾರ್ಯದರ್ಶಿ ಶಂಕರ್ ಕೊರವರ, ತಹಶೀಲ್ದಾರ್ ರೇಷ್ಮಾಶೆಟ್ಟಿ, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ವಾಲ್ಮೀಕಿ ಸಂಘದ ಉಪಕಾರ್ಯದರ್ಶಿ ಮಧುಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.