ಚಿಕ್ಕಮಗಳೂರು: ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲು ಬರುವ ವರಮಹಾಲಕ್ಷ್ಮಿ ಹಬ್ಬದ ಸಿದ್ದತೆ ನಗರದಲ್ಲಿ ಜೋರಾಗಿತ್ತು. ಪೂಜಾ ಸಾಮಾಗ್ರಿಗಳ ಖರೀದಿಯಲ್ಲಿ ಮಾರುಕಟ್ಟೆಗಳಲ್ಲಿ ಜನ ಮುಗಿಬಿದ್ದರು.
ನಗರದ ಮಾರ್ಕೆಟ್ ರಸ್ತೆ, ದೀಪಾ ನರ್ಸಿಂಗ್ ಹೋಮ್ ರಸ್ತೆಗಳಲ್ಲಿ ಹೂವು, ಹಣ್ಣು ಖರೀದಿಸಲು ಗುರುವಾರ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಎಂ.ಜಿ. ರಸ್ತೆ, ಹನುಮಂತಪ್ಪ ವೃತ್ತ, ಬೈಪಾಸ್ ರಸ್ತೆ, ಕಲ್ಯಾಣ ನಗರ, ಎಐಟಿ ವೃತ್ತ ಸೇರಿ ವಿವಿಧೆಡೆ ಖರೀದಿ ಭರಾಟ ಜೋರಾಗಿತ್ತು.
ವರಮಹಾಲಕ್ಷ್ಮಿ ಹಬ್ಬದಂದು ಮನೆಗಳಲ್ಲಿ ಲಕ್ಷ್ಮಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ಈ ವೇಳೆ ಅಲಂಕಾರಕ್ಕಾಗಿ ಬಗೆ ಬಗೆಯ ಹೂವು ಮತ್ತು ಹಣ್ಣಗಳನ್ನು ಬಳಸುತ್ತಾರೆ. ಹೂವು, ಹಣ್ಣು, ಬಾಳೆಕಂದು, ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಮಹಿಳೆಯರು ಹೆಚ್ಚಾಗಿ ಕಂಡರು.
ಸೇವಂತಿ ಹೂವು ಮಾರಿಗೆ ₹100ರಿಂದ ₹150, ಮಲ್ಲಿಗೆ ₹100, ಚೆಂಡೂ ಹೂ 80₹ಕ್ಕೆ ಮಾರಾಟವಾಯಿತು. ಬಾಳೆದಿಂಡು ಜೋಡಿಗೆ ₹50, ಹೊಂಬಾಳೆ, ಮಾವಿನ ಸೊಪ್ಪು, ಬಿಡಿ ಹೂವು, ಗುಲಾಬಿ, ತುಳಸಿ ಹಾರಕ್ಕೆ ಬೇಡಿಕೆ ಇತ್ತು.
ಸೇಬು ಹಣ್ಣು ಕೆ.ಜಿ ₹200, ಮೂಸಿಂಬೆ ₹100, ಬಾಳೆಹಣ್ಣು ₹80, ದಾಳಿಂಬೆ ₹80, ದ್ರಾಕ್ಷಿ ₹120 ಇತ್ತು.
ಇದಲ್ಲದೇ ನಗರದ ಎಂ.ಜಿ. ರಸ್ತೆ, ಗುರುನಾಥ ಚಿತ್ರಮಂದಿರ ರಸ್ತೆಯಲ್ಲಿ ಲಕ್ಷ್ಮಿ ವಿಗ್ರಹ, ಮೂರ್ತಿ, ಮುಖವಾಡ, ಹಾರ, ಬಳೆ, ಅರಿಶಿಣ, ಮಾಂಗಲ್ಯಸರ, ಸೀರೆ, ಉತ್ತತ್ತಿ, ಕೊಬ್ಬರಿ ಸೇರಿ ಪೂಜಾ ಸಾಮಗ್ರಿಗಳನ್ನು ಮಹಿಳೆಯರು ಖರೀದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.