ADVERTISEMENT

ತರೀಕೆರೆ: 4 ವರ್ಷವಾದರೂ ಮನೆ ಅಪೂರ್ಣ

ಸಹಾಯಧನದ ನಿರೀಕ್ಷೆಯಲ್ಲಿ ನಿರಾಶ್ರಿತ ಫಲಾನುಭವಿಗಳು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 2:39 IST
Last Updated 6 ನವೆಂಬರ್ 2020, 2:39 IST
ತರೀಕೆರೆ ಪಟ್ಟಣದಲ್ಲಿ ಸುಂದರೇಶ ಬಡಾವಣೆಯಲ್ಲಿ ಅರ್ಧಕ್ಕೆ ನಿಂತಿರುವ ಫಲಾನುಭವಿಯ ಮನೆ.
ತರೀಕೆರೆ ಪಟ್ಟಣದಲ್ಲಿ ಸುಂದರೇಶ ಬಡಾವಣೆಯಲ್ಲಿ ಅರ್ಧಕ್ಕೆ ನಿಂತಿರುವ ಫಲಾನುಭವಿಯ ಮನೆ.   

ತರೀಕೆರೆ: ಸರ್ಕಾರದ ವಸತಿ ಯೋಜನೆಯ ಭರವಸೆಯನ್ನು ನಂಬಿ ತಾಲ್ಲೂಕಿನಲ್ಲಿ ನಿರಾಶ್ರಿತ ಫಲಾನುಭವಿಗಳು ಮನೆ ಕಟ್ಟಲು ಆರಂಭಿಸಿದ್ದರು. ಆದರೆ, ಕೋವಿಡ್‌ ಕಾರಣದಿಂದಾಗಿ ಪರಿಹಾರಧನ ಸಿಗದೆ ಬಹುತೇಕ ಮಂದಿ, ಮನೆ ನಿರ್ಮಾಣ ಕಾರ್ಯವನ್ನು ಅರ್ಧಕ್ಕೆ ಕೈಬಿಟ್ಟಿದ್ದಾರೆ.

20 ವರ್ಷಗಳ ಹಿಂದೆ ಸರ್ಕಾರ ಈ ನಿರಾಶ್ರಿತರಿಗೆ ನಿವೇಶನಗಳನ್ನು ನೀಡಿತ್ತು. ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಶ್ರಯ ಮನೆಗಳನ್ನು ಕಟ್ಟಿಕೊಳ್ಳಲು ವಿವಿಧ ಯೋಜನೆಗಳನ್ನು ಪರಿಚಯಿಸಿದವಲ್ಲದೇ ಮನೆ ಕಟ್ಟಿಕೊಳ್ಳಲು ಸಹಾಯಧನವನ್ನು ನೀಡುವ ಭರವಸೆ ನೀಡಲಾಗಿತ್ತು.

‘ವಾಜಪೇಯಿ ವಸತಿ ಯೋಜನೆ, ಡಾ.ಅಂಬೇಡ್ಕರ್ ವಸತಿ ಯೋಜನೆ, ಪ್ರಧಾನ ಮಂತ್ರಿ ಅವಾಜ್ ಯೋಜನೆ, ಡಿ ದೇವರಾಜ ಅರಸು ನಗರ ವಸತಿ ಯೋಜನೆ ಮೂಲಕ ಕೇಂದ್ರ ಸರ್ಕಾರ ₹ 1.5 ಲಕ್ಷ ಹಾಗೂ ರಾಜ್ಯ ಸರ್ಕಾರ 1.20 ಲಕ್ಷ ದೊರೆಯುವ ನಿರೀಕ್ಷೆಯಲ್ಲಿ ಫಲಾನುಭವಿಗಳು ಇದ್ದರು.

ADVERTISEMENT

2018, 19, ಮತ್ತು 20 ಸಾಲಿನಲ್ಲಿ ಯೋಜನೆಯ ಗುರಿಯನ್ನು ಸರ್ಕಾರ ನಿಗದಿಪಡಿಸಲಿಲ್ಲ. 2016-17 ಮತ್ತು 2017-18 ನೇ ಸಾಲಿನಲ್ಲಿ ಮಾತ್ರ ಫಲಾನುಭವಿಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಇತರೇ ಹಿಂದುಳಿದ ವರ್ಗಗಳ ಒಟ್ಟು 600 ಮಂದಿ ಫಲಾನುಭವಿಗಳು ಯೋಜನೆಗಾಗಿ ಅರ್ಜಿಯನ್ನು ಹಾಕಿದ್ದಾರೆ.

ಆದರೆ, ಈವರೆಗೆ ಕೇವಲ 45 ಮಂದಿ ಫಲಾನುಭವಿಗಳು ಮಾತ್ರ ಯೋಜನೆಯ ಪೂರ್ಣ ಲಾಭವನ್ನು ಪಡೆದುಕೊಂಡಿದ್ದಾರೆ. ಉಳಿದವರು ಕಂತಿನಲ್ಲಿ ₹ 30 ಸಾವಿರದಂತೆ ಒಂದು ಅಥವಾ ಎರಡೋ ಕಂತು ಮಾತ್ರ ಪಡೆದುಕೊಂಡಿದ್ದಾರೆ.

ಸರ್ಕಾರಗಳ ನಿರ್ಲಕ್ಷ್ಯ ಹಾಗೂ ವಿಳಂಬ ನೀತಿಯಿಂದಾಗಿ ನಾಲ್ಕು ವರ್ಷಗಳಾದರೂ ನಮ್ಮ ಮನೆ ಕಟ್ಟುವ ಕನಸು ನನಸಾಗುತ್ತಿಲ್ಲ, ಸರ್ಕಾರ ಕೂಡಲೇ ಗಮನಹರಿಸಲಿ ಎಂದು ಫಲಾನುಭವಿಗಳು ಒತ್ತಾಯಿಸಿದ್ದಾರೆ.

‘ಫಲಾನುಭವಿಗಳಿಗೆ ಉಳಿಕೆ ಹಣ ನೀಡಲು ವಸತಿ ನಿಗಮದ ಮೂಲಕ ಸಾಕಷ್ಟು ಬಾರಿ ಪ್ರಸ್ತಾವ ಹೋಗಿದೆ. ರಾಜ್ಯ ಸರ್ಕಾರದಿಂದ ಕಂತಿನ ಮೂಲಕ ಹಣ ಬರುತ್ತಿದೆ. ಕೇಂದ್ರ ಸರ್ಕಾರದ ಸೌಲಭ್ಯ ಬರುವ ನಿರೀಕ್ಷೆಯಿದೆ’ ಎನ್ನುತ್ತಾರೆ ಯೋಜನೆ ಅಧಿಕಾರಿ ಪುರಸಭೆಯ ಬಿ.ಕೆ.ಉಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.