ಚಿಕ್ಕಮಗಳೂರು: ನಗರದ ಬಸವನಹಳ್ಳಿ ಕೆರೆಯೊಳಗಿನ (ದಂಟರಮಕ್ಕಿ ಕೆರೆ) ದಿಬ್ಬದಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಎಡವಟ್ಟಾಗಿದೆ, ಶಿಲ್ಪಿಗಳಿಂದ ಪ್ರಮಾದವಾಗಿದೆ ಎಂದು ನಿರ್ಮಾಣದ ಉಸಾಬರಿ ಹೊತ್ತಿರುವ ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ ಇಲ್ಲಿ ಬುಧವಾರ ಹೇಳಿದರು.
ನಗರಸಭೆ ಅಧ್ಯಕ್ಷನಾಗಿದ್ದಾಗ ಪ್ರತಿಮೆ ನಿರ್ಮಾಣ ವಿಚಾರ ಚಿಗುರೊಡೆದು, ಕೆಲ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಮತ್ತು ಕೈಯಿಂದಲೂ ಹಣ ಹಾಕಿ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಪ್ರತಿಮೆ ನಿರ್ಮಾಣ ಕಾಮಗಾರಿಯನ್ನು ಶಿವಮೊಗ್ಗದ ಕಲಾವಿದರೊಬ್ಬರಿಗೆ ವಹಿಸಲು ಮುಂದಾಗಿದ್ದೆವು. ಮಾತುಕತೆ ಯನ್ನೂ ಮಾಡಿದ್ದೆವು. ಆದರೆ, ರವೀಂದ್ರ ಪ್ರಭು ಅವರ ಒತ್ತಡದ ಮೇರೆಗೆ ಸ್ಥಳೀಯ ಕಲಾವಿದ ಏಕಾಂತರಾಮು ಅವರಿಗೆ ವಹಿಸಲಾಯಿತು. ಅವರು ಪ್ರತಿಮೆ ಸರಿಯಾಗಿ ರೂಪಿಸಲಿಲ್ಲ. ಪ್ರತಿಮೆಯ ವಿರೂಪ ಸರಿಪಡಿಸಲು ಬೆಂಗಳೂರಿನ ಮಧುಸೂದನ್ ಎಂಬುವರಿಗೆ ವಹಿಸಲಾಯಿತು. ಆತ ಹಣ ಪಡೆದು ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಇದಾದ ನಂತರ ಸಿರಿಮನೆ ಕಾಫಿಯ ರಮೇಶ್ ಅವರ ಸಲಹೆ ಮೇರೆಗೆ ಮಂಗಳೂರಿನ ಗುತ್ತಿಗೆದಾರ
ನೊಬ್ಬನಿಗೆ ವಹಿಸಲಾಯಿತು. ಆತನಿಂದಲೂ ಪ್ರತಿಮೆ ಸರಿಯಾ
ಗಲಿಲ್ಲ. ಪ್ರತಿಮೆ ನಿರ್ಮಾಣದ ಶುರುವಾತಿನಲ್ಲಿ ಸುಮಾರು 60 ಮಂದಿ ಜತೆಗಿದ್ದರು. ಈಗ ಯಾರೂ ಜತೆಗಿಲ್ಲ. ಪ್ರತಿಮೆಗೆ ಸಂಬಂಧಿಸಿದಂತೆ ಈವರೆಗೆ ₹35 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ’ ಎಂದರು.
‘ಪ್ರತಿಮೆ ಸರಿಯಾಗಿ ನಿರ್ಮಿಸಿಲ್ಲ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ (ಫೇಸ್ಬುಕ್, ವಾಟ್ಸ್ಆ್ಯಪ್) ಪೋಸ್ಟ್ ಹಾಕಿದ್ದಾರೆ. ದೇಣಿಗೆ ಸಂಗ್ರಹಿಸಿ ಲಪಟಾಯಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಸಂಗ್ರಹಿಸಿದ ದೇಣಿಗೆಗಿಂತ ಹತ್ತು ಪಟ್ಟು ಖರ್ಚಾಗಿದೆ. ವಂಚನೆ ಮಾಡಿದ್ದೇನೆ ಎಂದು ಸಾಬೀತುಪಡಿಸಿದರೆ ಉರುಳು ಹಾಕಿಕೊಳ್ಳುತ್ತೇನೆ’ ಎಂದು ಸವಾಲು ಹಾಕಿದರು.
‘ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಿಸುವ ಕುರಿತು ನಗರಸಭೆ ಸದಸ್ಯರ ಸಭೆಯಲ್ಲಿ ಚರ್ಚಿಸಿದ್ದೆವು. ನಗರಸಭೆ ಹಣ ಬಳಸಬಾರದು ಎಂದು ಸಲಹೆ ವ್ಯಕ್ತವಾಗಿತ್ತು. ಪ್ರತಿಮೆ ನಿರ್ಮಿಸಲು ಯಾವುದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಪ್ರತಿಮೆ ನಿರ್ಮಾಣ ವಿಚಾರ
ದಲ್ಲಿ ಎಡವಿದ್ದೇನೆ. ಅದಕ್ಕೆ ಕ್ಷಮೆಯಾ
ಚಿಸುತ್ತೇನೆ. ಪಕ್ಷದೊಳಗಿನ ಮತ್ತು ಹೊರಗಿನ ವಿರೋಧಿಗಳು ರಾಜಕೀ
ಯವಾಗಿ ಹಣಿಯಲು ಷಡ್ಯಂತ್ರ ಮಾಡಿ ‘ಕೂಪ’ಕ್ಕೆ ತಳ್ಳಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
‘ವಿರೂಪ ಪ್ರತಿಮೆಯನ್ನು ಕೆಡವಿ
ದ್ದೇವೆ. ಅಲ್ಲಿ ಹೊಸ ಪ್ರತಿಮೆ ಸ್ಥಾಪಿಸಲಾ
ಗುವುದು. ಬೆಂಗಳೂರಿನಲ್ಲಿ ಪ್ರತಿಮೆ ಸಿದ್ಧವಾಗಿದೆ, ತರಬೇಕು’ ಎಂದು ಉತ್ತರಿಸಿದರು.
ಮಹೇಶ್ ಶೆಟ್ಟಿ, ಮೋಹನ್ಗೌಡ, ಕೌಶಿಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.