ADVERTISEMENT

ರಸ್ತೆ ಅಗೆತ: ಪ್ರಕರಣ ದಾಖಲಿಸಿ; ಶಾಸಕ ಟಿ.ಡಿ.ರಾಜೇಗೌಡ

ಕೊಪ್ಪದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 6:18 IST
Last Updated 30 ಜುಲೈ 2025, 6:18 IST
ಕೊಪ್ಪ ತಾಲ್ಲೂಕು ಪಂಚಾಯಿತಿಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು
ಕೊಪ್ಪ ತಾಲ್ಲೂಕು ಪಂಚಾಯಿತಿಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು   

ಕೊಪ್ಪ: ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ನಡೆಸುವಾಗ ಅನುಮತಿ ಪಡೆಯದೆ ರಸ್ತೆ ಅಗೆದಿರುವುದಕ್ಕೆ ಪ್ರಕರಣ ದಾಖಲಿಸಿ, ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಿ ಎಂದು ಶಾಸಕ ಟಿ.ಡಿ.ರಾಜೇಗೌಡ ಅವರು ಅಧಿಕಾರಿಗಳಿಗೆ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಮಾತನಾಡಿ, ‘ಜೆಜೆಎಂ ಕಾಮಗಾರಿ ನಡೆಸುವಾಗ ಬೇಸಿಗೆಯಲ್ಲಿ ರಸ್ತೆ ಅಗೆದಿದ್ದಾರೆ, ಈವರೆಗೂ ಮುಚ್ಚಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿ, ‘ಇದಕ್ಕೆ ಸಂಬಂಧಿಸಿ ಜಯಪುರ, ಹರಿಹರಪುರ ಠಾಣೆಗೆ ದೂರು ಕೊಟ್ಟಿದ್ದೇವೆ’ ಎಂದರು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸರ್ಕಲ್ ಇನ್ ಸ್ಪೆಕ್ಟರ್ ಗುರುದತ್ ಕಾಮತ್ ಅವರಿಗೆ ಶಾಸಕರು ತಿಳಿಸಿದರು. ‘ನೀರಿನ ಮೂಲವಿಲ್ಲದೆ ಕಾಮಗಾರಿ ನಡೆಸಿದರೆ ಬಿಲ್ ಮಂಜೂರು ಮಾಡಬೇಡಿ. ಕಾಮಗಾರಿ ಪಂಚಾಯಿತಿ ಸುಪರ್ದಿಗೆ ತೆಗೆದುಕೊಳ್ಳಬೇಡಿ’ ಎಂದು ಪಿಡಿಒಗಳಿಗೆ ಹೇಳಿದರು.

ADVERTISEMENT

ಭೂ ಮಂಜೂರಾತಿ ಸಮಿತಿ ಅಧ್ಯಕ್ಷ ಕೆ.ಜಿ.ಶೋಭಿಂತ್ ಮಾತನಾಡಿ, ಈ ಹಿಂದೆ ವಸತಿ ಮಂಜೂರಾದ ಸಮಯ ಮಾರ್ಟ್‌ಗೇಜ್ ಮಾಡಿ, ಪಂಚಾಯಿತಿಯವರು ಹಕ್ಕುಪತ್ರ ವಾಪಸ್ ಕೊಟ್ಟಿಲ್ಲ. ಜನರಿಗೆ ಬ್ಯಾಂಕ್ ಸಾಲ ಇನ್ನಿತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಗಲಿ ಗ್ರಾಮದ ಜನರು ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ನವೀನ್ ಕುಮಾರ್, ಈ ಬಗ್ಗೆ ಗಮನ ಹರಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದರು.

ತಹಶೀಲ್ದಾರ್ ಲಿಖಿತಾ ಮೋಹನ್ ಮಾತನಾಡಿ, 10 ಮನೆಗಳಿಂದ 50 ಮನೆಗಳವರೆಗೆ ಇದ್ದರೆ ಉಪಗ್ರಾಮ ಎಂದು, 50 ಮನೆಗಳ ಮೇಲೆ ಇದ್ದರೆ ಕಂದಾಯ ಗ್ರಾಮ ಎಂದು ಪರಿಗಣಿಸಿ ಎಲ್ಲ ಸವಲತ್ತು ಕೊಡಬಹುದು ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಪರವಾಗಿಯೂ ಇರಬೇಕು. ಅರಣ್ಯ ವ್ಯವಸ್ಥಾಪನಾಧಿಕಾರಿ ಆದೇಶವನ್ನು ಡಿಎಫ್ಒ ತಿರಸ್ಕರಿಸುವಂತಿಲ್ಲ. ಡಿಎಫ್ಒ ಬೇಕಾದರೆ ಮೇಲ್ಮನವಿ ಸಲ್ಲಿಸಬಹುದು ಎಂದು ಶಾಸಕರು ಹೇಳಿದರು.

ಭೂ ಮಂಜರಾತಿ ಸಮಿತಿ ಅಧ್ಯಕ್ಷ ಕೆ.ಜಿ.ಶೋಭಿಂತ್, ಫಾರಂ 50, 53ರಲ್ಲಿ ಭೂಮಿ ಮಂಜೂರು ಆಗದೇ 57ರಲ್ಲಿ ಅರ್ಜಿ ಕೊಟ್ಟಿದ್ದನ್ನು ಪರಿಗಣಿಸಬೇಕು ಎಂದರು.

ದನಗಳನ್ನು ಅರಣ್ಯಕ್ಕೆ ಬಿಡಬೇಡಿ ಎಂದು ಅರಣ್ಯ ಸಚಿವರು ಮಾಡಿರುವ ಆದೇಶ ಮಲೆನಾಡಿಗೆ ಕಂಟಕ ಎಂದು ಎಸ್.ಎನ್.ರಾಮಸ್ವಾಮಿ ಹೇಳಿದರು. ಹೊರ ರಾಜ್ಯದ ಜಾನುವಾರುಗಳನ್ನು ರಾಜ್ಯದ ಅರಣ್ಯದಲ್ಲಿ ಮೇಯಿಸಲು ಅವಕಾಶವಿಲ್ಲದಂತೆ ಸಚಿವರು ಆದೇಶಿಸಿದ್ದಾರೆ. ನಮ್ಮ ಭಾಗಕ್ಕೆ ಅನ್ವಯ ಆಗದು ಎಂದು ರಾಜೇಗೌಡ ಹೇಳಿದರು.

ಕೆಡಿಪಿ ಸದಸ್ಯ ನಾರ್ವೆ ಅಶೋಕ್ ಮಾತನಾಡಿ, ಹೇರೂರು ಭಾಗದಲ್ಲಿ ಬೀಟೆ ಮರ ಕಡಿದ ಪ್ರಕರಣಕ್ಕೆ ಕ್ರಮವಾಗಿಲ್ಲ ಎಂದರು. ಪ್ರಕರಣ ದಾಖಲಾಗಿದ್ದು, ವ್ಯಕ್ತಿ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರ್.ಎಫ್.ಒ ರಂಗನಾಥ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಯೂ ಆದ ಜಂಟಿ ಕೃಷಿ ನಿರ್ದೇಶಕಿ ಸುಜಾತಾ ಎಚ್.ಎಲ್ ಮಾತನಾಡಿ, ‘ಈ ವರ್ಷ ಪೂರೈಕೆಯಾಗಿರುವ ಯೂರಿಯಾ ಗೊಬ್ಬರದ ಅರ್ಧದಷ್ಟು ಮಾತ್ರ ಮುಂದಿನ ವರ್ಷ ಪೂರೈಕೆಯಾಗಲಿದೆ. ನ್ಯಾನೋ ಗೊಬ್ಬರ ಪೂರೈಕೆಗೆ ಆದ್ಯತೆ ನೀಡಲಾಗಿದೆ’ ಎಂದರು.

ಉಪ ನೋಂದಣಿ ಕಚೇರಿ ತಾಲ್ಲೂಕು ಕಚೇರಿ ಕೆಳಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಕೆಡಿಪಿ ಸದಸ್ಯರು ಹೇಳಿದರು. ಇದಕ್ಕೆ ಶಾಸಕರು, ಉಪ ನೋಂದಣಾಧಿಕಾರಿ ಹಾಗೂ ತಹಶೀಲ್ದಾರ್ ಚರ್ಚಿಸಿ, ವೃದ್ಧರಿಗೆ, ಅಂಗವಿಕಲರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ ಎಂದರು.

ಕೆಡಿಪಿ ಸದಸ್ಯರಾದ ಬಿ.ಪಿ.ಚಿಂತನ್, ರಾಜಶಂಕರ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ಸಾದಿಕ್ ನಾರ್ವೆ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಶಶಿಕುಮಾರ್ ಇದ್ದರು.

ಹಿರೇಕೊಡಿಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ನಡಾವಳಿ ತಿದ್ದುಪಡಿ ದೂರನ್ನು ಪರಿಗಣಿಸಿ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಿ.
ಟಿ.ಡಿ.ರಾಜೇಗೌಡ ಶಾಸಕ

‘ಕಾರ್ಮಿಕರ ಮಕ್ಕಳು ಬಲಿ’

ಕೆಡಿಪಿ ಸದಸ್ಯೆ ಪ್ರಿಯಾಂಕಾ ಜೆ.ಯು. ಮಾತನಾಡಿ ‘11 ವರ್ಷದ ಬಾಲಕಿ ಗರ್ಭಿಣಿಯಾದ ಪ್ರಕರಣ ಗಂಭೀರವಾದದ್ದು. ಕಾಫಿ ಎಸ್ಟೇಟ್‌ಗೆ ಬಂದಿರುವ ಹೊರ ರಾಜ್ಯದ ಕೂಲಿ ಕಾರ್ಮಿಕರ ಮಕ್ಕಳು ಇಂತಹ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ’ ಎಂದು ಸಭೆಯ ಗಮನಕ್ಕೆ ತಂದರು. ಶಾಸಕ ರಾಜೇಗೌಡ ಮಾತನಾಡಿ 'ಎಸ್ಟೇಟ್‌ನಲ್ಲಿ ಕಾರ್ಮಿಕರಿಗೆ ಪೊಕ್ಸೊ ಬಗ್ಗೆ ಅರಿವು ಮೂಡಿಸಬೇಕು. ಈ ಬಗ್ಗೆ ಕಾರ್ಮಿಕ ಇಲಾಖೆ ಪೊಲೀಸ್ ಇಲಾಖೆ ಸಿಬ್ಬಂದಿ ಒಳಗೊಂಡ ತಂಡ ರಚಿಸಿ ಅರಿವು ಮೂಡಿಸಬೇಕು ಎಂದರು.

ಪೈಲಟ್ ಸರ್ವೆಗೆ ಆಯ್ಕೆ ತಹಶೀಲ್ದಾರ್ ಲಿಖಿತಾ ಮೋಹನ್ ಮಾತನಾಡಿ ಅರಣ್ಯ ಹಾಗೂ ಕಂದಾಯ ಜಾಗ ಗುರುತಿಸುವ ನಿಟ್ಟಿನಲ್ಲಿ ಕಳೆದ ವಾರ ಸಭೆ ನಡೆದಿದೆ. ತಾಲ್ಲೂಕಿನ ಅಡಿಗೆಬೈಲು ಜಯಪುರ ಅದ್ದಡ ಗ್ರಾಮವನ್ನು ಪೈಲಟ್ ಸರ್ವೆಗೆ ಆಯ್ಕೆ ಮಾಡಲಾಗಿದೆ. ಹಳೆಯ ಒತ್ತುವರಿ ಆಗಿದ್ದರೆ ಅದನ್ನು ಅರಣ್ಯ ಇಲಾಖೆ ಬಿಟ್ಟುಕೊಡಲಿದ್ದು ಪರ್ಯಾಯವಾಗಿ ಅರಣ್ಯ ಪ್ರದೇಶ ಪಡೆಯಲಿದೆ. ಇದು ಕಂದಾಯ ಇಲಾಖೆಗೆ ಒಂದು ಅವಕಾಶ ಎಂದರು. ರಾಜೇಗೌಡ ಅವರು ಪ್ರತಿಕ್ರಿಯಿಸಿ ಮೂರು ತಿಂಗಳಲ್ಲಿ ಎರಡು ಸಭೆಗಳಾಗಿವೆ. ಸರ್ಕಾರದ ನಿರ್ದೇಶನದಂತೆ ಅಧಿಕಾರಿಗಳು ಕೆಲಸ ಮಾಡಿದರೆ ಹಕ್ಕುಪತ್ರ ವಿತರಣೆಗೆ ಬಹುತೇಕ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.