ಮೂಡಿಗೆರೆ (ಚಿಕ್ಕಮಗಳೂರು): ತಾಲ್ಲೂಕಿನ ಚಾರ್ಮಾಡಿ ಘಾಟಿಯ ಗಡಿ ಗ್ರಾಮವಾದ ಬಿದಿರುತಳದಲ್ಲಿ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಅರಣ್ಯ ಪ್ರದೇಶ ಅಗ್ನಿಗೆ ಆಹುತಿಯಾಗಿದೆ.
ರಾತ್ರಿ ಸುಮಾರು 9.45ರ ಸುಮಾರಿಗೆ ಬಿದಿರುತಳ ಗ್ರಾಮದ ಬೆಟ್ಟದ ಮೇಲೆ ಉರಿಯುತ್ತಿರುವ ದೃಶ್ಯ ಚಾರ್ಮಾಡಿಘಾಟಿ ರಸ್ತೆಗೆ ಕಂಡಿದೆ. ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿರುವ ಬಗ್ಗೆ ದಾರಿಹೋಕರು ಅರಣ್ಯ ಇಲಾಖೆಗೆ ಮಾಹಿತಿ ತಲುಪಿಸಿದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯವರು ರಸ್ತೆಯಿಲ್ಲದ ದುರ್ಗಮ ಹಾದಿಯಲ್ಲಿ ಸುಮಾರು ಒಂದೂವರೆ ತಾಸು ನಡೆದು ಸಾಗಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು.
ಮಂಗಳವಾರ ಬೆಳಿಗ್ಗೆ ಕೂಡ ಘಾಟಿ ಪ್ರದೇಶದಲ್ಲಿ ಗಸ್ತು ತಿರುಗಿದ ಸಿಬ್ಬಂದಿ, ಬಿದಿರುತಳ ಸಮೀಪ ಅಲ್ಲಲ್ಲಿ ಹೊಗೆಯಾಡುತ್ತಿದ್ದ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ.
‘ಹುಲ್ಲುಗಾವಲು ಪ್ರದೇಶದಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯಕ್ಕೆ ಹಾನಿಯಾಗಿಲ್ಲ. ರಾತ್ರಿಯೇ ಸಂಪೂರ್ಣವಾಗಿ ಬೆಂಕಿ ನಂದಿಸಲಾಯಿತು. ಮಂಗಳವಾರ ಮತ್ತೆ ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದ್ದು, ಬೆಂಕಿ ಕಾಣಿಸಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ಚರಣಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.