ಹೊಸದುರ್ಗ: ತಾಲ್ಲೂಕಿನ ವೇದಾವತಿ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಗೂಳಿಹಟ್ಟಿ ಡಿ.ಶೇಖರ್ ಒತ್ತಾಯಿಸಿದರು.
ಭಾನುವಾರ ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ಕೊಟ್ಟು ಮಾತನಾಡಿದರು.
ಪರವಾನಗಿ ಪಡೆದುಕೊಂಡು ಚಳ್ಳಕೆರೆಯಿಂದ ಅಜ್ಜಂಪುರಕ್ಕೆ ಸಾಗಿಸುತ್ತಿದ್ದ ಅಮಾಯಕರ 7 ಲಾರಿಗಳನ್ನು ಓವರ್ ಲೋಡ್ ಎಂಬ ಕಾರಣದಿಂದ ವಶಕ್ಕೆ ಪಡೆದಿರುವುದು ಸರಿ. ಆದರೆ, ಕಾನೂನುಬಾಹಿರವಾಗಿ ತಾಲ್ಲೂಕಿನಲ್ಲಿ ರಾಜಾರೋಷವಾಗಿ ಮರಳು ಮಾಫಿಯಾ ಮಾಡುತ್ತಿರುವ ನೂರಾರು ಟಿಪ್ಪರ್, ಲಾರಿ ಹಾಗೂ ಟ್ರ್ಯಾಕ್ಟರ್ಗಳನ್ನು ಏಕೆ ವಶಕ್ಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.
‘ತಾಲ್ಲೂಕಿನ ಮರಳು ದಂಧೆ ಮಾಡುತ್ತಿರುವ ರಾಜಕೀಯ ಬಲಾಢ್ಯರು ಪ್ರತಿ ತಿಂಗಳು ಒಂದು ಟಿಪ್ಪರ್ಗೆ ₹ 1 ಲಕ್ಷ, ಟ್ರ್ಯಾಕ್ಟರ್ಗೆ ₹ 15 ಸಾವಿರ ಮಾಮೂಲಿ ಕೊಡುತ್ತಿದ್ದಾರೆ. ಆದ್ದರಿಂದ ಅವರನ್ನು ಬಂಧಿಸುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ನನ್ನ ಜತೆಗೆ ಒಬ್ಬರು ಕಾನ್ಸ್ಟೆಬಲ್ ಕಳಿಸಿದರೆ ಮೂರು ದಿನದಲ್ಲಿ ಅಕ್ರಮ ಮರಳುಗಾರಿಕೆ ಮಾಡುವ ಸುಮಾರು 30 ಟಿಪ್ಪರ್ಗಳನ್ನು ಪೊಲೀಸ್ ಠಾಣೆ ವಶಕ್ಕೆ ಒಪ್ಪಿಸುತ್ತೇನೆ’ ಎಂದು ಒತ್ತಾಯಿಸಿದರು.
ನಿಯಮ ಉಲ್ಲಂಘಿಸಿ ಹೊರರಾಜ್ಯಗಳಿಗೆ ಮರಳು ಸಾಗಣೆ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.