ADVERTISEMENT

ಉತ್ತಮ ಸಮಾಜಕ್ಕೆ ಕಾನೂನು ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 7:40 IST
Last Updated 16 ಸೆಪ್ಟೆಂಬರ್ 2011, 7:40 IST

ಹೊಳಲ್ಕೆರೆ: ಎಲ್ಲರೂ ಕಾನೂನಿನ ಅರಿವು ಪಡೆಯುವುದರಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಷಾರಾಣಿ ಹೇಳಿದರು.

ತಾಲ್ಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ, ಶಿಕ್ಷಣ, ಅರಣ್ಯ, ಪೊಲೀಸ್ ಇಲಾಖೆಗಳು ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ  ಆಶ್ರಯದಲ್ಲಿ ಗುರುವಾರ ಪಟ್ಟಣದ ಮಂಜುನಾಥ ಪ್ರೌಢಶಾಲೆಯಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ, ಕಾನೂನು ಅರಿವು-ನೆರವು ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಭವಿಷ್ಯ ಭಾರತದ ಶಿಲ್ಪಿಗಳು. ದೇಶವನ್ನು ಮುನ್ನಡೆಸುವ ಜವಾಬ್ದಾರಿ ಇವರ ಮೇಲಿದೆ. ಆದ್ದರಿಂದ ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಕಾನೂನಿನ ಅರಿವಿಲ್ಲದೆ ಜನ ಅನೇಕ ಅಪರಾಧಗಳನ್ನು ಎಸಗುತ್ತಿದ್ದಾರೆ.

ನಿಯಮಗಳನ್ನು ಅರಿತು ನಡೆಯುವುದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಲು ಕಾನೂನಿನ ಅಂಶಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಜೀವನದಲ್ಲಿ ವಿದ್ಯಾರ್ಥಿ ಹಂತ ಪ್ರಮುಖ ಘಟ್ಟ. ಇಲ್ಲಿ ಪಡೆಯುವ ಜ್ಞಾನ, ವ್ಯಕ್ತಿತ್ವಗಳು ಜೀವನದ ಕೊನೆಯವರೆಗೂ ಇರುತ್ತವೆ. ಸಮಾಜಕ್ಕೆ ಮಾರಕವಾದ ಕೃತ್ಯಗಳಲ್ಲಿ ತೊಡಗದೆ, ಎಲ್ಲರಿಂದಲೂ ಉತ್ತಮ ವ್ಯಕ್ತಿ ಎನಿಸಿಕೊಳ್ಳಬೇಕು. ಮಹಾನ್ ದಾರ್ಶನಿಕರ ಆದರ್ಶಗಳನ್ನು ಮಾದರಿಯಾಗಿ ಇಟ್ಟುಕೊಂಡು ಅಧ್ಯಯನ ಮಾಡಬೇಕು ಎಂದರು.

ವಕೀಲ ಎಂ.ಎನ್. ಚಂದ್ರಕಾಂತ್ `ಮೋಟಾರು ವಾಹನ ಕಾಯಿದೆ~ ಮತ್ತು ಎಲ್.ಆರ್. ರಂಗಸ್ವಾಮಿ `ಪ್ರಥಮ ವರ್ತಮಾನ ವರದಿ~ ಕುರಿತು ಉಪನ್ಯಾಸ ನೀಡಿದರು.ವಕೀಲರ ಸಂಘದ ಅಧ್ಯಕ್ಷ ಎಂ. ಶಿವಶಂಕರ್, ಎಂ.ಬಿ. ಅರುಣ್ ಕುಮಾರ್, ಕಾರ್ಯದರ್ಶಿ ಡಿ.ಎನ್. ಪ್ರಶಾಂತ ಕುಮಾರ್, ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್. ಮಂಜುನಾಥ್, ಸಹಾಯಕ ಸರ್ಕಾರಿ ವಕೀಲ ಮನೋಹರ ಹಿಡಕಲ್, ಶಂಷೀದ್ ಅಲೀಖಾನ್, ವಲಯ ಅರಣ್ಯಾಧಿಕಾರಿ ಎಸ್. ನರಸಿಂಹ ಮೂರ್ತಿ, ಲಾಲಸಿಂಗ್ ನಾಯ್ಕ, ಡಿ.ಒ. ಸಿದ್ದಪ್ಪ, ಗಿರೀಶ್,ಆರ್.ಸಿ. ನಾಗರಾಜ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.