ADVERTISEMENT

ಏಡ್ಸ್ ತಡೆಗೆ ಜಾಗೃತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 10:15 IST
Last Updated 4 ಜನವರಿ 2011, 10:15 IST

ಚಳ್ಳಕೆರೆ: ಜಾಗತಿಕಮಟ್ಟದಲ್ಲಿ ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಮಾರಕ ಏಡ್ಸ್ ತಡೆಗಟ್ಟಲು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಮುಂದೆ ಬರಬೇಕು ಎಂದು ತಹಶೀಲ್ದಾರ್ ಅಲ್ಕೂರ ಬೋವಿ ಹೇಳಿದರು. ಚಳ್ಳಕೆರೆ ಪಟ್ಟಣದಲ್ಲಿ ಸೋಮವಾರ ತಾಲ್ಲೂಕು ಪಂಚಾಯ್ತಿ ಹಾಗೂ ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಅನಕ್ಷರಸ್ಥರಿಗೆ ಏಡ್ಸ್ ಕುರಿತು ಸರಿಯಾದ ಮಾಹಿತಿ ಇರುವುದಿಲ್ಲ. ಅದ್ದರಿಂದ ಪ್ರತಿಯೊಂದು ಹಳ್ಳಿಯಲ್ಲಿಯೂ ಇರುವ ಆಶಾ ಕಾರ್ಯಕರ್ತೆಯರು ಮಹಿಳೆ, ಪುರುಷರಲ್ಲಿ ಈ ರೋಗದ ಕುರಿತು ಮಾಹಿತಿ ನೀಡಬೇಕು. ಸುರಕ್ಷಿತ ಲೈಂಗಿಕತೆ, ಅನೈತಿಕ ಸಂಬಂಧ ಇವುಗಳ ಕುರಿತು ತಿಳಿಹೇಳುವ ಮೂಲಕ ಮಾರಕ ರೋಗದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಂಡು ರೋಗ ಬಾರದಂತೆ ಎಚ್ಚರ ವಹಿಸಬೇಕು.

ರೂಪಕಗಳ ಮೂಲಕ ಏಡ್ಸ್ ಜಾಗೃತಿಗಾಗಿ ಹಲವಾರು ಸಂಘ-ಸಂಸ್ಥೆಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಇದರ ಜತೆಗೆ ಆಶಾ ಕಾರ್ಯಕರ್ತೆಯರು ಹಳ್ಳಿಯ ಜನರ ಜತೆಗೆ ಉತ್ತಮ ಬಾಂಧವ್ಯದಿಂದ ವರ್ತಿಸುವ ಮೂಲಕ ಅವರಿಗೆ ಸಲಹೆ, ಮಾರ್ಗದರ್ಶನ ನೀಡಬೇಕಿದೆ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಪಾಲಾಕ್ಷ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಏಡ್ಸ್ ಎಂಬ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದಾಗಿ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಸುರಕ್ಷಿತ ಲೈಂಗಿಕತೆಯಿಂದಾಗಿ ಅನೇಕರು ಇಂತಹ ಮಾರಕ ರೋಗಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ನುಡಿದರು. ತಾಲ್ಲೂಕು ಪಂಚಾಯ್ತಿ ಇಒ ರಾಮನಾಥ ಗುಪ್ತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.