ಹೊಸದುರ್ಗ: ಯಾವುದೇ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಪರ ಬೆಂಬಲಿಗರು ಪಕ್ಷದ ಚಿಹ್ನೆ ಇರುವ ಬಾವುಟ, ಟೋಪಿ, ರುಮಾಲು ಹಾಕಿಕೊಂಡು ಮತಯಾಚನೆ ಮಾಡುವುದು ಸಾಮಾನ್ಯ. ಆದರೆ ತಾಲ್ಲೂಕಿನ ಮತ್ತೋಡು ಗ್ರಾಮದಲ್ಲಿ ಯುವಕ ಅಗ್ನಿ ರಂಗನಾಥ್ ಎಂಬುವವರು ಹಿಂದಲೆಯಲ್ಲಿ ಕಮಲದಂತೆ ಕೇಶ ವಿನ್ಯಾಸ ಮಾಡಿಸಿ, ಪ್ರಚಾರದಲ್ಲಿ ತೊಡಗಿದ್ದಾರೆ.
ಕೊರಳಿನ ತುಂಬಾ ಹೂ ಮಾಲೆ ಹಾಕಿಕೊಂಡು ಸುಡು ಬಿಸಿಲನ್ನು ಲೆಕ್ಕಿಸದೇ ಪಟ್ಟಣದಲ್ಲಿ ಶುಕ್ರವಾರ ತಿರುಗಾಡಿದರು.‘ನಾನು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡೈಲಾಗ್ಕಿಂಗ್ ಸಾಯಿಕುಮಾರ್ ಅವರ ಅಭಿಮಾನಿ. 8 ವರ್ಷದಿಂದ ಅವರ ಜತೆಗೆ ಸಂಪರ್ಕದಲ್ಲಿ ಇರುವುದರಿಂದ ಬಿಜೆಪಿ ಬಗೆಗಿನ ವ್ಯಾಮೋಹ ಹೆಚ್ಚಾಯಿತು. ಗೂಳಿಹಟ್ಟಿ ಡಿ.ಶೇಖರ್ ಈ ಬಾರಿ ಹೊಸದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ನನಗೆ ತುಂಬಾ ಖುಷಿಯಾಗಿದೆ. ನಾನು ಅವರನ್ನು ಈ ಬಾರಿ ಗೆಲ್ಲಿಸಲೇಬೇಕು ಎಂಬ ಹಂಬಲದಿಂದ ಈ ವೇಷಧಾರಿಯಾಗಿ ಒಂದು ತಿಂಗಳಿನಿಂದ ಮನೆಬಿಟ್ಟು ಹಳ್ಳಿ, ಹಳ್ಳಿ ಸುತ್ತಾಡುತ್ತಿದ್ದೇನೆ. ಅವರು ಗೆಲ್ಲುವ ವರೆಗೂ ಮನೆಗೆ ಹೋಗಬಾರದೆಂದು ನಿರ್ಧರಿಸಿದ್ದೇನೆ’ ಎಂದು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
‘ಜನರ ಗಮನ ಸೆಳೆಯಲು ನನ್ನ ಹಿಂದಲೆಯನ್ನು ಕಮಲದ ಹೂ ಆಕಾರ ಮಾಡಿಕೊಂಡಿದ್ದೇನೆ. ಹೂ ಅಂಗಡಿಗಳ ಬಳಿಗೆ ಹೋದಾಗ ಅಭಿಮಾನಿಗಳು ಉಚಿತವಾಗಿ ಕೊಡುವ ಹೂವಿನ ಹಾರಗಳನ್ನು ಕೊರಳಿಗೆ ಹಾಕಿಕೊಂಡು ತಿರುಗಾಡುತ್ತೇನೆ. ಗೂಳಿಹಟ್ಟಿ ಡಿ.ಶೇಖರ್ ಸಚಿವರಾಗಿದ್ದಾಗ ತಾಲ್ಲೂಕಿನಲ್ಲಿ ಆಗಿದ್ದ ಸಾವಿರಾರು ಕೋಟಿ ವೆಚ್ಚದ ಕಾಮಗಾರಿ, ಎಲ್ಲಾ ವರ್ಗದ ಜನರ ಜೊತೆಗೆ ಅವರು ನಡೆದುಕೊಂಡಿದ್ದ ರೀತಿ, ನೀತಿ ಬಗ್ಗೆ ಮತದಾರರಿಗೆ ಪರಿಚಯಿಸುತ್ತಿದ್ದೇನೆ’ ಎಂದರು. ‘20 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಎಸ್.ಸುರೇಶ್ ನೀರಗುಂದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.