ADVERTISEMENT

ಕಾಯ್ದೆ ಪ್ರಕಾರ ಕೇಬಲ್ ಸೇವೆ ನೀಡಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 6:45 IST
Last Updated 15 ಅಕ್ಟೋಬರ್ 2017, 6:45 IST

ಚಿತ್ರದುರ್ಗ: ‘ಕೇಬಲ್ ನೆಟ್‌ವರ್ಕ್ ಕಾಯ್ದೆಯನ್ವಯ ಉತ್ತಮ ಸೇವೆ ಒದಗಿಸಿ ಗ್ರಾಹಕಸ್ನೇಹಿಯಾಗಿ ಸೇವೆ  ಒದಗಿಸಬೇಕು’ ಎಂದು ಉಪ ವಿಭಾಗಾಧಿಕಾರಿ ರಾಘವೇಂದ್ರ ಕೇಬಲ್ ಆಪರೇಟರ್ ಸೂಚಿಸಿದ್ದಾರೆ.

ನಗರದ ಪೋರ್ಟ್ ಸಿಟಿ ಡಿಜಿಟಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಹಾಗೂ ಚಿತ್ರದುರ್ಗ ಕೇಬಲ್ ನೆಟ್‌ವರ್ಕ್, ಸಿಟಿ ನೆಟ್‌ವರ್ಕ್ ಲಿಮಿಟೆಡ್, ಅಮ್ಮ ಕೇಬಲ್ ನೆಟ್‌ವರ್ಕ್ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿ ಅವರು ಕೇಂದ್ರದವರಿಗೆ ಸೂಚನೆ ನೀಡಿದರು.

‘ಸ್ಯಾಟಲೈಟ್‌ನಿಂದ ರಿಸೀವರ್ ಮೂಲಕ ಸಂಪರ್ಕ ತೆಗೆದುಕೊಂಡು, ಮರುಪ್ರಸಾರ ಮಾಡುವ ಆಪರೇಟರ್‌ಗಳು ಕೇಬಲ್‌ ನೆಟ್‌ವರ್ಕ್ ಕಾಯ್ದೆ ಅನ್ವಯ ಅಂಚೆ ಕಚೇರಿಯಲ್ಲಿ ಪರವಾನಗಿ ಪಡೆದುಕೊಳ್ಳಬೇಕು. ದೂರದರ್ಶನದಿಂದ ನೀಡಲಾಗುವ ಚಾನಲ್‌ಗಳನ್ನು ಪ್ರೈಂ ಬ್ಯಾಂಡ್‌ನಲ್ಲೇ ಪ್ರಸಾರ ಮಾಡಬೇಕು.

ADVERTISEMENT

ಟ್ರಾಯ್ ನಿರ್ದೇಶನದಂತೆ ಚಾನಲ್‌ಗಳಿಗೆ ವಿಧಿಸಲಾಗುವ ದರವನ್ನು ಪ್ರದರ್ಶನ ಮಾಡಬೇಕು. ಗ್ರಾಹಕರ ಕುಂದುಕೊರತೆ ನಿವಾರಣೆ ಮಾಡುವುದಕ್ಕಾಗಿ ಗ್ರಾಹಕ ಸೇವಾ ಕೇಂದ್ರವನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು’ ಎಂದು ತಿಳಿಸಿದರು.

‘ಫೋರ್ಟ್ ಸಿಟಿ ನೆಟ್‌ವರ್ಕ್‌ನಿಂದ ಗ್ರಾಹಕರಿಗೆ ಕೇಬಲ್ ಸೇವೆ ಸಿಗುತ್ತಿಲ್ಲ’ ಎಂದು ದೂರು ಬಂದಿದೆ. ‘ಈ ನೆಟ್‌ವರ್ಕ್‌ನಿಂದ ಒಂದು ಚಾನಲ್ ಮಾತ್ರ ಪ್ರಸಾರ ಮಾಡಲಾಗುತ್ತಿದೆ’ ಎಂಬುದು ಗ್ರಾಹಕರು ದೂರಿದ್ದಾರೆ. ‘ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಕೇಬಲ್ ನೆಟ್‌ವರ್ಕ್ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆ ಪ್ರಕಾರವೇ ಸೇವೆ ನೀಡಬೇಕು’ ಎಂದು ಆಪರೇಟರ್‌ಗಳಿಗೆ ಸೂಚಿಸಿದರು. ನಿಯಮ ಪಾಲನೆ ಮಾಡದಿದ್ದಲ್ಲಿ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಕೇಬಲ್ ನೆಟ್‌ವರ್ಕ್ ಕಾಯ್ದೆಯ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ ಮಾಡಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಈ ಸಮಿತಿಯ ಸಭೆಯು ಇದೇ 16 ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಕೇಬಲ್‌ ಆಪರೇಟರ್‌ಗಳು ತಾವು ಪಡೆದಿರುವ ಪರವಾನಗಿ, ಸಂಪರ್ಕದ ವಿವರ, ಟ್ರಾಯ್‌ನ ನಿಯಮದಂತೆ ನಿಗದಿ ಮಾಡಿರುವ ದರದ ವಿವರವನ್ನು ಸಲ್ಲಿಕೆ ಮಾಡಬೇಕು’ ಎಂದು ಸೂಚಿಸಿದರು

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್, ವಾರ್ತಾಧಿಕಾರಿ ಹಾಗೂ ಕೇಬಲ್ ನೆಟ್‌ವರ್ಕ್ ಕಾಯ್ದೆ ಮೇಲ್ವಿಚಾರಣಾ ಸಮಿತಿ ಕಾರ್ಯದರ್ಶಿ ಧನಂಜಯ, ನಗರಸಭೆ ಕಂದಾಯಾಧಿಕಾರಿ ವಾಸಿಂ, ಕಂದಾಯ ನಿರೀಕ್ಷಕ ಶಿವಶರಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.