ADVERTISEMENT

ಕಾರ್ಮಿಕ ಸಚಿವ ಪರಮೇಶ್ವರನಾಯ್ಕ ಭರವಸೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 9:01 IST
Last Updated 18 ಸೆಪ್ಟೆಂಬರ್ 2013, 9:01 IST

ಚಿತ್ರದುರ್ಗ: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ` 3ಕೋಟಿ ವೆಚ್ಚದಲ್ಲಿ ಹಾಗೂ ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ` 6ಕೋಟಿ ವೆಚ್ಚದಲ್ಲಿ ಕಾರ್ಮಿಕ ಕಲ್ಯಾಣ ಭವನ ನಿರ್ಮಿಸಲಾಗುವುದು ಎಂದು ಕಾರ್ಮಿಕ ಸಚಿವ ಪರಮೇಶ್ವರನಾಯ್ಕ ಭರವಸೆ ನೀಡಿದರು.

ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಬಡಗಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್‌.ಎಂ. ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ` 200ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗಳ ಕಾರ್ಮಿಕರ ಅನುಕೂಲಕ್ಕಾಗಿ 21 ವೃತ್ತಿ ಕೌಶಲ ಶಿಕ್ಷಣ ಸಂಸ್ಥೆ ತೆರೆಯಲಾಗುವುದು. ಜತೆಗೆ ರಾಜ್ಯದ 100 ಕಡೆಗಳಲ್ಲಿ ಪ್ರತಿ ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಗಾಗಿ
` 2ಕೋಟಿಯಂತೆ ಒಟ್ಟು ` 200ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.

ರಾಜ್ಯದಲ್ಲಿರುವ 11 ಮಹಾನಗರ ಪಾಲಿಕೆಗಳಲ್ಲಿ 100 ಮನೆಗಳ ಸಮೂಚ್ಛಾಯ ಕಟ್ಟಲು ` 130 ಕೋಟಿ ಮೀಸಲಿಡಲಾಗಿದೆ. ಈಗಾಗಲೇ ಮಂಡಳಿಯಲ್ಲಿ ನೋಂದಣಿ ಪಡೆದಿರುವವರು ಕಟ್ಟಡ ನಿರ್ಮಿಸುವ ವೇಳೆ ಮೃತರಾದಲ್ಲಿ ` 2ಲಕ್ಷ ಹಾಗೂ ನೋಂದಣಿಯಾಗದ ಕುಟುಂಬಕ್ಕೆ ` 50 ಸಾವಿರ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ 98 ಲಕ್ಷ ಫಲಾನುಭವಿ ಕುಟುಂಬಗಳಿಗೆ ರಾಷ್ಟ್ರೀಯ ವಿಮಾ ಯೋಜನೆಯಡಿ ಕುಟುಂಬದ ಐವರು ಸದಸ್ಯರಿಗೆ ವಾರ್ಷಿಕ ` 30ಸಾವಿರ ವೈದ್ಯಕೀಯ ಭತ್ಯೆ ನೀಡುವ ಕೇಂದ್ರ ಸರ್ಕಾರದ ಯೋಜನೆ ಕೂಡ ಯಶಸ್ವಿಯಾಗಿ ನಡೆಸಿಕೊಂಡು ಹೋಗಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಬೆಂಗಳೂರು, ಹುಬ್ಬಳ್ಳಿ, ಗದಗ್‌, ಮಂಗಳೂರು ಸೇರಿದಂತೆ ಬೃಹತ್‌ ನಗರಗಳಲ್ಲಿ ಕರ್ನಾಟಕ ಜರ್ಮನ್‌ ಮಲ್ಟಿಸ್ಕಿಲ್‌ (ಬಹುಕೌಶಲ) ಡೆವಲಪ್‌ಮೆಂಟ್‌ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ ಎಂದರು.

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ನೇತೃತ್ವವಹಿಸಿ ಮಾತನಾಡಿ, ದೇಶದ ಅಭಿವೃದ್ಧಿಗೆ ಸೋಮಾರಿಗಳಿಗಿಂತ ದುಡಿಯುವ ಕೈಗಳು ಹೆಚ್ಚಾಗಿ ಬೇಕಿದೆ. ಸಮಯಪ್ರಜ್ಞೆ ಯಾರಲ್ಲಿದೆಯೋ ಆತ ಜೀವನದಲ್ಲಿ ಎಲ್ಲವನ್ನು ಪಡೆಯುತ್ತಾನೆ. ತಾನು ಮಾಡುವ ಉದ್ಯೋಗದ ಜತೆಗೆ ಮಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸಂಪದ್ಭರಿತ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು ಎಂದು ಕರೆ ನೀಡಿದರು.

ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕಾಧಿಕಾರಿ ಎಸ್‌.ಆರ್‌.ವೀಣಾ, ಕಾರ್ಮಿಕ ನಿರೀಕ್ಷಕ ರಾಜಣ್ಣ, ಅನಿಲ್‌, ವಕೀಲ ಖಾಲಿದ್‌, ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್‌. ರಮೇಶ್‌ ಹಾಜರಿದ್ದರು. ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್‌ ಪ್ರಾಸ್ತವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.