ADVERTISEMENT

ಗೋಶಾಲೆ ಶೀಘ್ರ ಆರಂಭಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 4:50 IST
Last Updated 4 ಆಗಸ್ಟ್ 2012, 4:50 IST

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಮೇವಿನ ಅಭಾವ ಸೃಷ್ಟಿಯಾಗಿದ್ದು, ನಾಳೆಯೇ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ  ಶಾಸಕ ಎಂ. ಚಂದ್ರಪ್ಪ ಅಧಿಕಾರಿಗೆ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ತಾಳ್ಯ ಹೋಬಳಿಯಲ್ಲಿ ಕಡಿಮೆ ಮಳೆ ಬಿದ್ದಿದೆ. ಚಿತ್ರಹಳ್ಳಿ ಗೇಟ್‌ನಲ್ಲಿ ಗೋಶಾಲೆ ಆರಂಭಿಸುವುದರಿಂದ ಎಚ್.ಡಿ. ಪುರ, ಉಪ್ಪರಿಗೇನ ಹಳ್ಳಿ, ಕೊಳಾಳು, ನುಲೇನೂರು ರೈತರಿಗೆ ಉಪಯೋಗ ಆಗಲಿದೆ. ಇದು ಮುಖ್ಯ ವೃತ್ತ ಆಗಿರುವುದರಿಂದ ರೈತರಿಗೆ ಹಳ್ಳಿಗಳಿಗೆ ಹೋಗಿ ಬರಲು ಅನುಕೂಲ ಆಗಲಿದೆ. ಇಂದೇ ಸ್ಥಳ ಪರಿಶೀಲನೆ ನಡೆಸಿ, ಗೋಶಾಲೆ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಸರೋಜಾ ಅವರಿಗೆ ಸೂಚಿಸಿದರು.

ಮೂರು ರಾಜ್ಯಗಳಲ್ಲಿ ಬರ ಪರಿಸ್ಥಿತಿ ಇದ್ದು, ಒಣ ಮೇವು ದೊರೆಯುವುದು ಕಷ್ಟ. ಆದ್ದರಿಂದ ಸುಮಾರು 25 ಎಕರೆ ಸರ್ಕಾರಿ ಜಮೀನಿನಲ್ಲಿ ಮೇವಿನ ಬೀಜಗಳನ್ನು ಬಿತ್ತಬೇಕು. ಇದರಿಂದ ಒಂದೆರಡು ತಿಂಗಳಲ್ಲಿ ಹಸಿಮೇವು ದೊರೆಯಲಿದೆ. ರೈತರು ಸಂಕಷ್ಟದಲ್ಲಿದ್ದು, ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ವೈ. ಶ್ರೀಧರ್ ಮತ್ತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

ಹನುಮಂತದೇವರ ಕಣಿವೆಯ ಕಟ್ಟಡಗಳ ಕಾಮಗಾರಿ ಆರಂಭಿಸಿ ನಾಲ್ಕು ವರ್ಷಗಳಾಯಿತು. ಆದರೆ, ಕಾಮಗಾರಿ ಇನ್ನೂ ಮುಗಿದಿಲ್ಲ. ನಿಮ್ಮ ಇಲಾಖೆ ಇಷ್ಟೊಂದು ನಿಧಾನ ಎಂದು ಗೊತ್ತಾಗಿದ್ದರೆ, ಬೇರೆ ಇಲಾಖೆಗೆ ಕೊಡುತ್ತಿದ್ದೆ. ಕೋಟ್ಯಂತರ ರೂಪಾಯಿ ಅನುದಾನ ಕೊಟ್ಟರೂ ಕೆಲಸ ಮಾತ್ರ ಆಗುತ್ತಿಲ್ಲ. ಇದರಿಂದ ಬೇಸತ್ತು ಹೊಸ ಅನುದಾನ ತರಲು ಉತ್ಸಾಹವೇ ಇಲ್ಲದಂತಾಗಿದೆ. ನನ್ನ ವೇಗಕ್ಕೆ ಕೆಲಸ ಮಾಡಿದ್ದರೆ ಇನ್ನೂ ರೂ.500 ಕೋಟಿ ಅನುದಾನ ತರುತ್ತಿದ್ದೆ. ನಿಮಗೆಲ್ಲಾ ನಾಚಿಕೆಯಾಗಬೇಕು ಎಂದು ಎಂಜಿನಿಯರ್ ರವಿಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಆಗಸ್ಟ್ 15ಕ್ಕೆ ವಾಣಿಜ್ಯ ಸಂಕಿರ್ಣ, ಪದವಿಪೂರ್ವ ಕಾಲೇಜು ಕಟ್ಟಡಗಳ ಉದ್ಘಾಟನೆಯಾಗಲಿದ್ದು, ಆ ವೇಳೆಗೆ ಎಲ್ಲಾ ಕೆಲಸ ಮುಗಿಸಬೇಕು. ಬಸ್ ನಿಲ್ದಾಣದ ಸುತ್ತ ಇರುವ ಗೂಡಂಗಡಿ ತೆರವುಗೊಳಿಸಬೇಕು ಎಂದು ಸೂಚಿಸಿದ ಅವರು, ತಾಲ್ಲೂಕಿನಲ್ಲಿ 3,859 ರೈತರ ್ಙ 7.42 ಕೋಟಿ ಸಾಲಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ 33 ಹೊಸ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕು. ಅಗತ್ಯ ಇರುವ ಕಡೆ ಬೋರ್‌ವೆಲ್ ಕೊರೆಸಿ ಪೈಪ್‌ಲೈನ್ ಅಳವಡಿಸಬೇಕು. ಪ್ರತಿ ಹಳ್ಳಿಯಲ್ಲಿಯೂ ಓವರ್‌ಹೆಡ್ ಟ್ಯಾಂಕ್ ನಿರ್ಮಿಸುವ ಗುರಿ ಇದ್ದು, ಟ್ಯಾಂಕ್ ಇಲ್ಲದ ಗ್ರಾಮ ಗುರುತಿಸಿ, ಈ ಬಾರಿಯ ಕ್ರಿಯಾಯೋಜನೆಯಲ್ಲಿ ಸೇರಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷೆ ಪಾರ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ನಾಗರಾಜ್, ಇಒ ಸಲೀಂ ಪಾಷಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.