ಹಿರಿಯೂರು: ತಾಲ್ಲೂಕಿನ ಕಸವನಹಳ್ಳಿ ಸೋಮವಾರ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಗ್ರಾಮಸ್ಥರೇ ಸೇರಿ ಆರಂಭಿಸಿದ ‘ನಮ್ಮ ಗ್ರಂಥಾಲಯ’ವನ್ನು ಬಾಲಕಿಯೊಬ್ಬಳು ಹಕ್ಕಿಗಳಿಗೆ ನೀರು, ತಿನಿಸು ನೀಡುವ ಮೂಲಕ ಲೋಕಾರ್ಪಣೆ ಮಾಡಿದಳು.‘ಓದಲು, ಕಾನೂನು ಅರಿವು ಪಡೆಯಲು, ವಿದ್ಯಾರ್ಥಿಗಳಿಗೆ ಉನ್ನತಶಿಕ್ಷಣಕ್ಕೆ ಪ್ರವೇಶ ಪಡೆಯಲು ಅಗತ್ಯವಿರುವ ಪುಸ್ತಕಗಳು ಇಲ್ಲೇ ಸಿಗುವಂತಾಗಬೇಕು ಎಂಬ ಕಾರಣಕ್ಕೆ ನಾವು ಗ್ರಾಮಸ್ಥರೆಲ್ಲ ಸೇರಿ ದುಡ್ಡು ಹಾಕಿ, ಗ್ರಂಥಾಲಯ ಆರಂಭಿಸಿದೆವು’ ಎಂದು ಗ್ರಾಮದ ರೈತ ಮುಖಂಡ ಕೆ. ರಮೇಶ್ ವಿವರಿಸಿದರು.
ಸಾರ್ವಜನಿಕರ ಸಹಕಾರದಿಂದ ಗ್ರಂಥಾಲಯಕ್ಕೆ ಕಾದಂಬರಿ, ಕಾವ್ಯ, ಕವಿತೆ, ವ್ಯಕ್ತಿ ವಿಶೇಷ, ಗಣಿತ, ವಿಜ್ಞಾನ, ಸಮಾಜಶಾಸ್ತ್ರ, ಕಾನೂನು ವಿಚಾರಕ್ಕೆ ಸಂಬಂಧಿಸಿದ ಒಂದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಜತೆಗೆ ಕನ್ನಡ, ಇಂಗ್ಲಿಷ್ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಪತ್ರಿಕೆಗಳನ್ನು ರಜೆರಹಿತವಾಗಿ ಪೂರೈಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸ್.ವಿ. ರಂಗನಾಥ್, ಬುಡೇನ್ ಸಾಬ್, ರಾಮಚಂದ್ರ, ಕಾಸೀಮ್ ಸಾಬ್, ನರಸಿಂಹಯ್ಯ, ಕೆಂಚರಾಯ, ಎಂ.ಜಿ. ರಾಜು, ಅಜ್ಜಯ್ಯ, ಪರಮೇಶ್ವರಪ್ಪ, ಶ್ರೀನಾಥ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.