ಚಿಕ್ಕಜಾಜೂರು: ಬೆಳಿಗ್ಗೆಯಿಂದ ಶಾಂತಿ ಸಾಗರದ (ಸೂಳೆಕೆರೆ)ಕೆರೆ ನೀರನ್ನು ಹಿರೇಕಂದವಾಡಿ ಗ್ರಾಮದಲ್ಲಿನ ಶುದ್ಧೀಕರಣ ಘಟಕಕ್ಕೆ ಹರಿಸಲಾಗಿದೆ. ಕಳೆದ ಜೂನ್ ತಿಂಗಳಲ್ಲಿ ಶಾಂತಿ ಸಾಗರದ ಕೆರೆಯಲ್ಲಿ ನೀರು ಖಾಲಿಯಾಗಿದ್ದರಿಂದ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿತ್ತು.
ರಾಜ್ಯದಲ್ಲಿ ಉತ್ತಮ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ನದಿಯಿಂದ ಶಾಂತಿಸಾಗರದ ಕೆರೆಗೆ ನೀರು ಹಾಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಬುಧವಾರ, ಗುರುವಾರ, ಶುಕ್ರವಾರ ಸಮೀಪದ ಹಿರೇಕಂದವಾಡಿ ಮತ್ತು ಕೊಟಿಗೆಹಳ್ಳಿ ಗ್ರಾಮಗಳಲ್ಲಿನ ಶುದ್ಧೀಕರಣ ಘಟಕಗಳನ್ನು ಸ್ವಚ್ಛಗೊಳಿಸಲಾಗಿತ್ತು.
ಚಿತ್ರದುರ್ಗಕ್ಕೆ ಹರಿದ ನೀರು: ಶನಿವಾರ ಶಾಂತಿ ಸಾಗದಿಂದ ಬಂದ ನೀರಿಗೆ ಸುರಕ್ಷತೆ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಪಿಎಸಿ ಪೌಡರ್ನ್ನು ಮಿಶ್ರಣ ಮಾಡಿ ಶುದ್ಧೀಕರಣ ಘಟಕದ 2 ಕ್ಲಾರಿಪಾಕ್ಲೇಟರ್ಗಳಿಗೆ ನೀರನ್ನು ಹಾಯಿಸಲಾಗುತ್ತಿದೆ. ಮಧ್ಯಾಹ್ನ 2 ಗಂಟೆಯಿಂದ ಚಿತ್ರದುರ್ಗ ನಗರಕ್ಕೆ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಘಟಕದ ಆಪರೇಟರ್ಗಳಾದ ಸಿದ್ದೇಶ್, ವೀರೇಶ್, ಸಣ್ಣಪ್ಪ, ಪ್ರಕಾಶ್ ಮಾಹಿತಿ ನೀಡಿದರು.
ವಾಲ್ವ್ಗಳ ಸ್ವಚ್ಛತೆ ನಂತರ ಹೊಳಲ್ಕೆರೆಗೆ ನೀರು: ಹಿರೇಕಂದವಾಡಿ ಶುದ್ಧೀಕರಣ ಘಟಕದಿಂದ ಹೊಳಲ್ಕೆರೆ ತಾಲ್ಲೂಕಿಗೆ ನೀರು ಯಾವಾಗ ಬಿಡಲಾಗುವುದು ಎಂಬ ಮಾಧ್ಯಮದ ಪ್ರಶ್ನೆಗೆ, ಹಿರೇಕಂದವಾಡಿಯಿಂದ ಹೊಳಲ್ಕೆರೆಗೆ ಹೋಗುವ ಮಾರ್ಗದ ಕಲ್ಲವ್ವನಾಗಹಳ್ಳಿ, ಬಿ.ದುರ್ಗ, ರಂಗವ್ವನಹಳ್ಳಿ, ಗುಂಜಿಗನೂರು, ಚಿಕ್ಕಜಾಜೂರು, ಬಾಣಗೆರೆ, ಪಾಡಿಗಟ್ಟೆ, ಆಡನೂರು ಗ್ರಾಮಗಳಲ್ಲಿರುವ ವಾಲ್ವ್ಗಳನ್ನು ಸ್ವಚ್ಛಗೊಳಿಸುವಂತೆ ಆಯಾ ಗ್ರಾಮ ಪಂಚಾಯ್ತಿ್ತ ಅಧ್ಯಕ್ಷರಿಗೆ ಮತ್ತು ಪಿಡಿಒಗಳಿಗೆ ತಿಳಿಸಲಾಗಿದೆ.
ಭಾನುವಾರ ಹೊಳಲ್ಕೆರೆಯ ಪಟ್ಟಣದಲ್ಲಿನ ವಾಲ್ವ್ಗಳನ್ನು ಮತ್ತು ಓವರ್ಹೆಡ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ವಾಲ್ವ್ಗಳ ಸ್ವಚ್ಛತೆ ಮುಗಿದ ನಂತರ, ಸೋಮವಾರ ಅಥವಾ ಮಂಗಳವಾರ ನೀರನ್ನು ಹಾಯಿಸಲಾಗುವುದು ಎಂದು ಹೊಳಲ್ಕೆರೆ ವಿಭಾಗದ ಹಿರೇಕಂದವಾಡಿ ಪಂಪ್ಹೌಸ್ ಆಪರೇಟರ್ಗಳಾದ ಲೋಕೇಶ್ ಹಾಗೂ ಮರಿಸ್ವಾಮಿ ಪ್ರಜಾವಾಣಿಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.