ADVERTISEMENT

ಜಾತಿಯ ಆಳ್ವಿಕೆಗೆ ಅವಕಾಶ ಸಲ್ಲದು

ಜೆ.ಎಚ್. ಪಟೇಲ್ ಅವರ 12ನೇ ಸ್ಮರಣೋತ್ಸವದ ಅಂಗವಾಗಿ `ಬದಲಾವಣೆಗಾಗಿ ನಾವು-ನೀವು'

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 6:35 IST
Last Updated 13 ಡಿಸೆಂಬರ್ 2012, 6:35 IST

ಚನ್ನಗಿರಿ: ಮಾನವತಾವಾದ ಹಾಗೂ ಪ್ರಗತಿವಾದದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆದರೆ, ಜಾತಿವಾದ ನಮ್ಮನ್ನು ಆಳುವಂತಾದರೆ ಅದು ಅಪಾಯ ಎಂದು ಚಿತ್ರದುರ್ಗ ಬೃಹಮನಠದ  ಶಿವಮೂರ್ತಿ ಮುರುಘಾ ಶರಣರು ಎಚ್ಚರಿಸಿದರು.

ಪಟ್ಟಣದ ಹೆಲಿಪ್ಯಾಡ್ ಮೈದಾನದಲ್ಲಿ ಜೆ.ಎಚ್. ಪಟೇಲ್ ಅವರ 12ನೇ ಸ್ಮರಣೋತ್ಸವದ ಅಂಗವಾಗಿ ಬುಧವಾರ ನಡೆದ `ಬದಲಾವಣೆಗಾಗಿ ನಾವು-ನೀವು' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲಸ ಮಾಡುವ ಶಕ್ತಿ ಇರುವ ವ್ಯಕ್ತಿಗಳಿಂದ ಮಾತ್ರ ಸುಧಾರಣೆ ಆಗಬಹುದು. ಅದುಬಿಟ್ಟು ಕೇವಲ ನಂಬರ್‌ಗಳಿಂದ ಬದಲಾವಣೆ ಆಗುತ್ತದೆ ಎಂಬುದು ತಪ್ಪು ಎಂದು ಅಭಿಪ್ರಾಯಪಟ್ಟರು.

ಪಟೇಲ್ ಅವರ ಚಿಂತನೆ, ಆಲೋಚನೆಗಳಿಂದ ಎಲ್ಲರಿಗೂ ಲಾಭ ಇದೆಯೋ ಹೊರತು, ಅವರಿಗೆ ಯಾವುದೇ ಲಾಭವಿಲ್ಲ. ಎಲ್ಲಾ ದಾರ್ಶನಿಕರ ವಿಚಾರಧಾರೆಗಳನ್ನು ಅವರು ಹೊಂದಿದ್ದರು. ಪ್ರಗತಿಪರ ಮತ್ತು ಮಾನವತಾವಾದ ಪ್ರಮುಖವಾಗಿ ಪಟೇಲ್ ಅವರಲ್ಲಿತ್ತು. ಪಟೇಲ ಅವರ ವಿಚಾರಧಾರೆಗಳಿಗೆ ನಾವೆಲ್ಲಾ ಹತ್ತಿರವಾಗೋಣ ಎಂದು ಹೇಳಿದರು.

ಸಾಣೇಹಳ್ಳಿಯ  ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲಿ ನಾವು ಕಂಡಂತಹ ಕನಸುಗಳು ಇಂದು ಭಗ್ನಗೊಂಡಿವೆ. ನೇತಾರರು ಹಾಗೂ ಮತದಾರರು ಸ್ವಾರ್ಥಿಗಳಾಗುತ್ತಿದ್ದಾರೆ. ಆದರ್ಶ ಎನ್ನುವುದು ನಮ್ಮ ಬದುಕಿನಲ್ಲಿ ಬರಬೇಕು. ಆಡಂಬರದಿಂದ ಆದರ್ಶ ಬರುವುದಿಲ್ಲ. ಪಟೇಲ್ ಅವರು ರಸಿಕರಾದರೂ ತತ್ವ-ಸಿದ್ಧಾಂತವನ್ನು ಎಂದೂ ಕೊಲೆ ಮಾಡಿದವರಲ್ಲ ಎಂದರು.

ವ್ಯಕ್ತಿಗತ ಶುದ್ಧಿಯಾಗದೇ ಬದಲಾವಣೆ ಆಗುವುದು ಅಸಾಧ್ಯ. ಇಂದು ಪಾತಕಗಳನ್ನು ಮಾಡದೇ ಇರುವಂತಹರನ್ನು ಹುಡುಕುವುದು ಕಷ್ಟವಾಗಿದೆ. ಉತ್ತಮ ಕೆಲಸ ಮಾಡುವವರು ನಿಷ್ಠುರತೆ ಮೈಗೂಡಿಸಿಕೊಳ್ಳುವುದು ಅವಶ್ಯ ಎಂದು ತಿಳಿಸಿದರು.

ಕೇಂದ್ರದ ಮಾಜಿ  ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, `ಹಳ್ಯಾಗೇ ಇರೂ ಸಿನಿಮಾ ಥಿಯೇಟರ್‌ಗೆ ಬೆಂಕಿ ಬಿದ್ದಂತಹ ಸ್ಥಿತಿ ರಾಜ್ಯದಲ್ಲಿದೆ. ಬಸ್ ಲಕ್ಸುರಿಯಾಗಿ ಇದೆಯೇ ಎಂದು ನೋಡಿ ಹತ್ತುವುದಕ್ಕಿಂತ ಬಸ್ ಡ್ರೈವರ್ ಸರಿಯಾಗಿ ಇದಾನೆಯೋ ಎಂದು ನೋಡುವುದು ನಮ್ಮ ಜಾಯಮಾನವಾಗಿದೆ. ರಾಜ್ಯ ರಾಜಕಾರಣ ಹೊಲೆಸೆದ್ದು, ಹೋಗಿದೆ' ಎಂದು ಬಿಜೆಪಿ ಸರ್ಕಾರವನ್ನು ಛೇಡಿಸಿದರು.

ಇಂದು ವಿಧಾನಸೌಧದಲ್ಲಿ ಸಜ್ಜನರು ಯಾರೂ ಇಲ್ಲ. ಬ್ಲೂಫಿಲ್ಮ್ ನೋಡುವವರು, ವ್ಯಭಿಚಾರಿಗಳು, ಕಳ್ಳರು, ಸುಳ್ಳರು, ಮಣ್ಣು ಮಾರಿಕೊಂಡು ಜೈಲು ಪಾಲಾದವರು ತುಂಬಿಕೊಂಡಿದ್ದಾರೆ. ಖಜಾನೆಯಲ್ಲಿ ನಯಾಪೈಸೆ ದುಡ್ಡಿಲ್ಲ. ಎಲ್ಲಾ ಬಿಜೆಪಿ ಸಚಿವರ ಹಾಗೂ ಶಾಸಕರ ಜೇಬು ಸೇರಿದೆ.

ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಪರಿವರ್ತನೆ ಮಾಡುವವರ ಮೇಲೆ ಸದಾ ತೂಗುಕತ್ತಿ ನೇತಾಡುತ್ತಿರುತ್ತದೆ. ಹಣ ಪ್ರಾಮುಖ್ಯತೆ ಪಡೆದುಕೊಂಡಿದೆಯೇ ಹೊರತು ಪಾರ್ಟಿ, ಪಕ್ಷ ಯಾರಿಗೂ ಬೇಕಾಗಿಲ್ಲ. ಬಿಜೆಪಿ ಸರ್ಕಾರ ಖಜಾನೆಯಲ್ಲಿ ಇರುವ ಹಣವನ್ನೆಲ್ಲಾ ಗುಡಿಸಿಕೊಂಡು ಹೋಗುತ್ತಿದೆ ಎಂದರು.

ಪಟೇಲ್ ಅವರದ್ದು ಗಾಳಿಯ ವಿರುದ್ಧ ಹೋರಾಟ ಮಾಡುವ ಪ್ರವೃತ್ತಿ. ಈ ರಾಜ್ಯ ಮಹಾನ್ ಪುರುಷರಿಗೆ ಜನ್ಮ ಕೊಟ್ಟಂತಹ ನಾಡಾಗಿದೆ. ಅರಮನೆ ದುಡ್ಡು ಪಾಪ ಕಾರ್ಯಕ್ಕೆ ಹೋಗುವುದಲ್ಲದೇ, ಪುಣ್ಯ ಕಾರ್ಯಕ್ಕೆ ಸಲ್ಲುವುದೇ ಎಂದುಕೊಂಡು ಮಣ್ಣು ಮಾರಿ ಹಣ ಮಾಡಿದರೆಲ್ಲಾ ಜೈಲಿನಲ್ಲಿ ಮುದ್ದೆ ಉಣ್ಣುತ್ತಾ ಇರುವಂತಾಗಿದೆ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.