ADVERTISEMENT

ತಾಡಪಾಲು ಪೊಲೀಸರ ವಶದಲ್ಲಿ!

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 4:40 IST
Last Updated 4 ಅಕ್ಟೋಬರ್ 2012, 4:40 IST

ಹಿರಿಯೂರು: ಬೆಂಗಳೂರಿನ `ಐಕಾನ್~ ಕಂಪೆನಿ ಕೃಷಿ ಇಲಾಖೆಗೆ ಪೂರೈಕೆ ಮಾಡಬೇಕಿದ್ದ ತಾಡಪಾಲುಗಳನ್ನು ಸರಕು ತಂದಿದ್ದ ವಾಹನ ಚಾಲಕ ಕೃಷಿ ಇಲಾಖೆ ಆವರಣದಲ್ಲಿ ಇಳಿಸುವ ಬದಲು ನಗರದ ಬಡಾವಣೆಯೊಂದರಲ್ಲಿ ಇಳಿಸುತ್ತಿದ್ದುದನ್ನು ಕಂಡ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಪುಷ್ಪಾ ಅವರ ಪತಿ ತಮ್ಮಣ್ಣ ಪೊಲೀಸರಿಗೆ ತಿಳಿಸಿದ್ದರಿಂದ ಸಂಶಯಗೊಂಡ ಪೊಲೀಸರು ತಾಡಪಾಲು ತುಂಬಿದ್ದ ವಾಹನಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಲಾರಿ ಚಾಲಕ ನಗರ ಠಾಣೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ, ಮೊಳಕಾಲ್ಮುರು ತಾಲ್ಲೂಕಿಗೆ 300 ಮತ್ತು ಹಿರಿಯೂರು ತಾಲ್ಲೂಕಿಗೆ 300 ತಾಡಪಾಲು ವಿತರಣೆ ಮಾಡಬೇಕಿತ್ತು. ಜವನಗೊಂಡನಹಳ್ಳಿ, ಕಸಬಾ, ಐಮಂಗಲ ಮತ್ತು ಧರ್ಮಪುರ ರೈತ ಸಂಪರ್ಕ ಕೇಂದ್ರಗಳಿಗೆ ತಲಾ 75ರಂತೆ ವಿತರಿಸಬೇಕಿತ್ತು. ಎಲ್ಲಾ ಕಡೆ ಲಾರಿ ಒಯ್ದು ವಿತರಣೆ ಮಾಡುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಆಟೋದಲ್ಲಿ ಕಳುಹಿಸಲು ವ್ಯವಸ್ಥೆ ಮಾಡುತ್ತಿದ್ದೆ. ಆಗ ಸಾರ್ವಜನಿಕರು ಬಂದು ಗಲಾಟೆ ಮಾಡಿ ತಡೆದರು ಎಂದು ತಿಳಿಸಿದ್ದಾನೆ.

ಕೃಷಿ ಇಲಾಖೆ ಹೊರಗೆ ಘಟನೆ ನಡೆದಿರುವ ಕಾರಣ ಈ ಬಗ್ಗೆ ತಮಗೆ ಮಾಹಿತಿ ಇಲ್ಲ. ಪೊಲೀಸರು ತನಿಖೆ ನಡೆಸಿದರೆ ವಾಸ್ತವ ಸಂಗತಿ ಹೊರಬರುತ್ತದೆ ಎಂದು ಕೃಷಿ ಅಧಿಕಾರಿ ಶ್ರೀನಿವಾಸರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಬಗ್ಗೆ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಬೇಕು ಎಂದು ತಮ್ಮಣ್ಣ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಕಂಪೆನಿಯಿಂದ ತಾಡಪಾಲುಗಳು ಬಂದಿರುವ ಬಗ್ಗೆ ಅಧಿಕೃತ ಬಿಲ್‌ಗಳಿವೆ. ಈ ಬಗ್ಗೆ ಮಾಹಿತಿ ನೀಡುವಂತೆ ಕೃಷಿ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು. ಸದ್ಯಕ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಪಿಎಸ್‌ಐ ಶಿವಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.