ADVERTISEMENT

ತುಮಕೂರು, ತಿಪಟೂರಿಗೆ 24 ಗಂಟೆ ನೀರು

ಕೇಂದ್ರ ಸರ್ಕಾರದಿಂದ ರೂ. 306 ಕೋಟಿ ನೆರವು

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 10:01 IST
Last Updated 15 ಜೂನ್ 2013, 10:01 IST
ತುಮಕೂರು, ತಿಪಟೂರಿಗೆ 24 ಗಂಟೆ ನೀರು
ತುಮಕೂರು, ತಿಪಟೂರಿಗೆ 24 ಗಂಟೆ ನೀರು   

ತುಮಕೂರು: ನಗರದ ಜನತೆಗೆ ನಿರಂತರ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ನೆರವು ಕೋರಿದೆ. ತುಮಕೂರು ಮತ್ತು ತಿಪಟೂರು ನಗರವನ್ನು ನಿರಂತರ ನೀರು ಯೋಜನೆ ವ್ಯಾಪ್ತಿಗೆ ತರಲಾಗುತ್ತಿದ್ದು, ನಗರ ನೀರು ಮತ್ತು ಒಳಚರಂಡಿ ಮಂಡಳಿ ಈಗಾಗಲೇ ಪ್ರಸ್ತಾವವನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಿದೆ.

ಪೌರಾಡಳಿತ ನಿರ್ದೇಶನಾಲಯವು ಈ ಪ್ರಸ್ತಾವವನ್ನು ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದು, ಈ ಸಂಬಂಧ ದೆಹಲಿಯಲ್ಲಿ ಈ ತಿಂಗಳ ಕೊನೆಯಲ್ಲಿ ಸಭೆ ನಡೆಯಲಿದೆ. ಇದಕ್ಕೆ ಬಹುತೇಕ ಒಪ್ಪಿಗೆ ಸಿಗಲಿದೆ. ಯೋಜನೆಗೆ ಬೇಕಾದ ಹಣವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸಲಿದೆ.

ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ನಗರಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ (ಯುಐಡಿಎಸ್‌ಎಸ್‌ಎಂಟಿ) ಈ ನೆರವು ತುಮಕೂರು ಮತ್ತು ತಿಪಟೂರಿಗೆ ದಕ್ಕಲಿದೆ. ಈ ಎರಡೂ ನಗರಗಳಲ್ಲಿ ಈಗಾಗಲೇ ಹೇಮಾವತಿ ಕುಡಿಯುವ ನೀರಿನ ವ್ಯವಸ್ಥೆ ಇರುವುದರಿಂದ 24 ಗಂಟೆ ನೀರು ಪೂರೈಕೆಗೆ ನೀರಿನ ಸಮಸ್ಯೆ ಇಲ್ಲ ಎಂದು ಹೇಳಲಾಗಿದೆ.

ನಿರಂತರ ಕುಡಿಯುವ ನೀರಿನ ಯೋಜನೆಗೆ ತುಮಕೂರು ನಗರಕ್ಕೆ ರೂ. 214 ಕೋಟಿ, ತಿಪಟೂರು ನಗರಕ್ಕೆ ರೂ. 92.2 ಕೋಟಿ ವೆಚ್ಚ ಮಾಡುವ ಅಂದಾಜಿಸಲಾಗಿದೆ ಎಂದು ಕೇಂದ್ರ ನಗಾರಭಿವೃದ್ಧಿ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇರುವುದರಿಂದ ಯೋಜನೆಗೆ ಬಹುತೇಕ ಒಪ್ಪಿಗೆ ಸಿಗಲಿದ್ದು, ಶೀಘ್ರವೇ ಯೋಜನೆ ಜಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಒಂದು ವೇಳೆ ಈ ಯೋಜನೆ ಜಾರಿಗೊಂಡರೆ ದಿನದ 24 ಗಂಟೆ ಕುಡಿಯುವ ನೀರಿನ ಸೌಲಭ್ಯ ಹೊಂದಿರುವ ರಾಜ್ಯದ ಕೆಲವೇ ಕೆಲವು ನಗರಗಳ ಪಟ್ಟಿಗೆ ತುಮಕೂರು, ತಿಪಟೂರು ಸೇರಿದಂತಾಗಲಿದೆ. ಹೇಮಾವತಿ ಎರಡನೇ ಹಂತದ ಯೋಜನೆ ಜಾರಿಯ ನಡುವೆಯೂ ಕುಡಿಯುವ ನೀರಿಗೆ ಪರಿತಪಿಸುತ್ತಿರುವ ತುಮಕೂರು ನಗರದ ಜನತೆಗೂ ನೆಮ್ಮದಿ ಸಿಗಲಿದೆ.

ಕನ್ನಡ ಗಂಗಾ ಯೋಜನೆಯಡಿ ತುಮಕೂರು ನಗರಕ್ಕೆ 24 ಗಂಟೆ ನಿರಂತರ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಹಿಂದಿನ ಸರ್ಕಾರ ರೂಪಿಸಿತ್ತು. ಕಳೆದ ವರ್ಷದ ನಗರಸಭೆ ಬಜೆಟ್‌ನಲ್ಲೂ ಕನ್ನಡ ಗಂಗಾ ಯೋಜನೆಯನ್ನು ಸೇರಿಸಲಾಗಿತ್ತು. ಆದರೆ ಹೊಸ ಸರ್ಕಾರ ಹಿಂದಿನ ಯೋಜನೆ ಸಂಪೂರ್ಣವಾಗಿ ಕೈಬಿಟ್ಟಿದ್ದು, ಕೇಂದ್ರ ಸರ್ಕಾರದ ನೆರವಿನಲ್ಲಿ ನಿರಂತರ ನೀರು ಯೋಜನೆ ಕೈಗೆತ್ತಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಒಳ ಚರಂಡಿ
ತುಮಕೂರು, ತಿಪಟೂರು ನಗರಕ್ಕೆ ಕುಡಿಯುವ ನೀರಿನ ಯೋಜನೆಗೆ ಹಣಕಾಸಿನ ನೆರವು ನೀಡಿದಂತೆಯೇ ಕೇಂದ್ರ ಸರ್ಕಾರ ಯುಐಡಿಎಸ್‌ಎಸ್‌ಎಂಟಿ ಯೋಜನೆಯಡಿ ಮಧುಗಿರಿ, ಚಿಕ್ಕನಾಯಕನಹಳ್ಳಿ ಪಟ್ಟಣಗಳಿಗೆ ಒಳಚರಂಡಿ ಯೋಜನೆಗೆ ನೆರವು ನೀಡುತ್ತಿದೆ.

ಈ ಎರಡು ತಾಲ್ಲೂಕಿನಲ್ಲಿ ಒಳಚರಂಡಿ ಯೋಜನೆಗಾಗಿ ನೆರವು ಕೇಳಿ ಕೇಂದ್ರ ಸರ್ಕಾರಕ್ಕೆ ಪೌರಾಡಳಿತ ನಿರ್ದೇಶನಾಲಯ ಪ್ರಸ್ತಾವ ಸಲ್ಲಿಸಿದೆ. ಈ ವಿಷಯವು ಕೂಡ ಈ ತಿಂಗಳ ಕೊನೆಯಲ್ಲಿ ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಸಭೆಯಲ್ಲಿ ಚರ್ಚೆಗೆ ಬರಲಿದೆ. ಇದಕ್ಕೂ ಒಪ್ಪಿಗೆ ಸಿಗಲಿದೆ ಎಂದು ನಗರ ನೀರು ಮತ್ತು ಒಳಚರಂಡಿ ಮಂಡಳಿ ಇಲಾಖೆ ಮೂಲಗಳು ತಿಳಿಸಿವೆ. ಮಧುಗಿರಿಗೆ ರೂ. 33.6 ಕೋಟಿ, ಚಿಕ್ಕನಾಯಕನಹಳ್ಳಿಗೆ ರೂ. 33 ಕೋಟಿ ವೆಚ್ಚದ ಅಂದಾಜಿನ ಯೋಜನೆ ರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.