ADVERTISEMENT

ದೇವರ ಹೆಸರಲ್ಲಿ ಮೌಢ್ಯ ಸಲ್ಲ: ಆದಿಜಾಂಬವ ಶ್ರೀ.

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 5:00 IST
Last Updated 15 ಫೆಬ್ರುವರಿ 2011, 5:00 IST

ಹೊಸದುರ್ಗ: ದೇವರ ಹೆಸರಿನಲ್ಲಿ ಮೌಢ್ಯವನ್ನು ಬಿತ್ತುವ ಕೆಲಸ ನಡೆಯಬಾರದು ಎಂದು ಹಿರಿಯೂರು ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ  ಹೇಳಿದರು.ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಮಾತಂಗಮ್ಮದೇವಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಆದಿಜಾಂಬವ ಸಮಾವೇಶದ ನೇತೃತ್ವ ವಹಿಸಿ ಅವರು ಮಾತನಾಡಿದರು.ಮನುಷ್ಯನ ನೆಮ್ಮದಿ ನಂಬಿಕೆಗೆ ದೇವರು ಬೇಕು. ವೈಚಾರಿಕ ಹಿನ್ನೆಲೆಯಲ್ಲಿಯೂ ದೇವರ ಆರಾಧನೆ ಮಾಡಬಹುದು. ಆದರೆ, ಅಂಧಶ್ರದ್ಧೆ ಬೇಡ ಎಂದು ಸಲಹೆ ಮಾಡಿದರು.

ಯಾವುದೇ ಸಮಾಜ ಅಭಿವೃದ್ಧಿ ಕಾಣಬೇಕಾದರೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಸಮಾಜ ಬಾಂಧವರು ಒಳಜಗಳ ಬಿಟ್ಟು ಎಲ್ಲರೂ ಒಟ್ಟಾಗಿ ಸಮಾಜದ ಅಭಿವೃದ್ಧಿಗೆ ದುಡಿಯಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಸದಸ್ಯಎಂ. ಲಕ್ಷಣ ಮಾತನಾಡಿ, ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಕಾಣಬೇಕು ಎಂದರು.

ದಾವಣಗೆರೆ ಜಿಲ್ಲೆ ಸಾಕ್ಷರತಾ ಸಮಿತಿ ಸಂಯೋಜಕ ಹೆಗ್ಗೆರೆ ರಂಗಪ್ಪ, ಜಿ.ಪಂ. ಸದಸ್ಯೆ ಅನಿತಾ ಬಸವರಾಜ್, ಆದಿಜಾಂಬವ ಸಮಾಜದ ಅಧ್ಯಕ್ಷ ಆರ್. ತಿಪ್ಪಯ್ಯ, ವಕೀಲ ಬೀಸನಹಳ್ಳಿ ಜಯಪ್ಪ, ಸಮಾಜದ ಮುಖಂಡ ಕೈನಡು ಚಂದ್ರಪ್ಪ ಮಾತನಾಡಿದರು. ತಾ.ಪಂ. ಸದಸ್ಯೆ ನಾಗರತ್ನಮ್ಮ, ಕಂಗುವಳ್ಳಿ  ಗ್ರಾ.ಪಂ. ಅಧ್ಯಕ್ಷೆ ಹನುಮಕ್ಕ, ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ದೊಡ್ಡಯ್ಯ, ದಸಂಸ ಜಿಲ್ಲಾ  ಸಂಘಟನಾ ಸಂಚಾಲಕ ಮಳಲಿ ಶೇಖರಪ್ಪ, ಗ್ರಾ.ಪಂ. ಸದಸ್ಯ ಸೋಮಶೇಖರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.