ಚಿತ್ರದುರ್ಗ: ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯ್ತಿಯ ಮಳಿಗೆಯೊಂದರಲ್ಲಿ ಕೊಳೆತಿರುವ ಸುಮಾರು 60 ಅಕ್ಕಿಚೀಲಗಳು ಪತ್ತೆಯಾಗಿವೆ.
ತಲಾ 50 ಕೆಜಿ ತೂಕದ ಈ ಚೀಲಗಳಲ್ಲಿ ಕಳೆದ 7-8 ವರ್ಷಗಳ ಹಿಂದೆ ಸಂಗ್ರಹಿಸಿಡಲಾಗಿತ್ತು. `ಕೂಲಿಗಾಗಿ ಕಾಳು~ ಯೋಜನೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಕೂಲಿಕಾರ್ಮಿಕರಿಗೆ ವಿತರಿಸಲು ಅಕ್ಕಿ ಸಂಗ್ರಹಿಸಿಡಲಾಗಿತ್ತು. ಆದರೆ, ಸಮರ್ಪಕವಾಗಿ ಯೋಜನೆ ಅನುಷ್ಠಾನಗೊಳಿಸಿಲ್ಲ ಮತ್ತು ಅಕ್ಕಿಯನ್ನು ಸಹ ಹಿಂತಿರುಗಿಸದೆ ಗ್ರಾ.ಪಂ. ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.
ಗ್ರಾಮ ಪಂಚಾಯ್ತಿಯ ಮಳಿಗೆಯೊಂದರಲ್ಲಿ ಈ ಅಕ್ಕಿ ಚೀಲಗಳನ್ನು ಸಂಗ್ರಹಿಸಿಡಲಾಗಿತ್ತು. ಕೆಲವು ದಿನಗಳಿಂದ ಈ ಮಳಿಗೆಯಿಂದ ವಾಸನೆಯಿಂದ ಬರುತ್ತಿದ್ದರಿಂದ ಸಂಶಯಗೊಂಡ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸೋಮವಾರ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ರುದ್ರಮುನಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
`ಕೂಲಿಗಾಗಿ ಕಾಳು ಯೋಜನೆಯ ಅಕ್ಕಿಯನ್ನು ಬಳಕೆ ಮಾಡದೆ ಕೊಳೆಯುವಂತೆ ಮಾಡಲಾಗಿದೆ. ಈ ವಿಷಯದಲ್ಲಿ ಗ್ರಾಮ ಪಂಚಾಯ್ತಿಯ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದಿದೆ. ಅಕ್ಕಿ ಬಳಕೆಯಾಗದಿದ್ದರೆ ತಾಲ್ಲೂಕು ಪಂಚಾಯ್ತಿಗೆ ಹಿಂತಿರುಗಿಸಬೇಕಾಗಿತ್ತು. ಒಂದೆರಡು ಕಾಮಗಾರಿಗಳನ್ನು ಅನುಷ್ಠಾನಗೊಳಿಸದ ಪರಿಣಾಮ ಈ ರೀತಿ ಘಟನೆ ನಡೆದಿದೆ~ ಎಂದು ರುದ್ರಮುನಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.