ADVERTISEMENT

ಪರಿಶಿಷ್ಟರ ಅಭಿವೃದ್ಧಿಗೆ ಸಕಲ ನೆರವು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 6:10 IST
Last Updated 12 ಅಕ್ಟೋಬರ್ 2011, 6:10 IST

ಹೊಳಲ್ಕೆರೆ: ರಾಜ್ಯದ ಪರಿಶಿಷ್ಟ ವರ್ಗದ ಜನರ ಸರ್ವಾಂಗೀಣ ಅಭಿವೃದ್ಧಿಗೆ ಸಕಲ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಆಸ್ನೋಟಿಕರ್ ಭರವಸೆ ನೀಡಿದರು.

ತಾಲ್ಲೂಕಿನ ಬೊಮ್ಮನಕಟ್ಟೆಯಲ್ಲಿ ಮಂಗಳವಾರ ಎಸ್‌ಟಿ ಮೊರಾರ್ಜಿ ದೇಸಾಯಿ ವಸತಿಶಾಲೆ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಶಿಷ್ಟ ವರ್ಗದ ಶೇ. 90ಕ್ಕೂ ಹೆಚ್ಚು ಕುಟುಂಬಗಳು ಆರ್ಥಿಕವಾಗಿ ದುರ್ಬಲವಾಗಿವೆ. ಈ ಹಿಂದುಳಿದ ಜನಾಂಗ ಹಿಂದಿನಿಂದಲೂ ಸಮಾಜದ ಶೋಷಣೆಗೆ ಒಳಗಾಗಿದ್ದು, ರಾಜಕೀಯ ಪಕ್ಷಗಳೂ ಕಡೆಗಣಿಸಿದ್ದವು.

ಹಿಂದಿನ ಸರ್ಕಾರಗಳು ಕೇವಲ ಮತ ಪಡೆಯಲು ಇವರನ್ನು ಬಳಸಿಕೊಂಡರೇ ಹೊರತು, ಯಾರೂ ಸಮಾಜದ ಅಭಿವೃದ್ಧಿಯತ್ತ ಚಿಂತಿಸಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಸಮಾಜದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಯಿತು. ಶಾಲಾ- ಕಾಲೇಜು, ಹಾಸ್ಟೆಲ್, ಸಮುದಾಯ ಭವನ ನಿರ್ಮಾಣದಂತಹ ಹಲವಾರು ಯೋಜನೆಗಳನ್ನು ಜಾರಿಗೊಳಿಸಿತು ಎಂದರು.

ಮಹರ್ಷಿ ವಾಲ್ಮೀಕಿ ಹಿಂದೂಗಳ ಪವಿತ್ರ ಗ್ರಂಥ ರಾಮಾಯಣ ರಚಿಸಿದರು. ಬಿಜೆಪಿ ಶ್ರೀರಾಮನ ಸಿದ್ಧಾಂತ ಅಳವಡಿಸಿಕೊಂಡಿದ್ದು, ರಾಮರಾಜ್ಯದ ಕನಸು ಕಂಡಿದೆ ಎಂದು ಅವರು ಹೇಳಿದರು.

ಶಾಸಕ ಎಂ. ಚಂದ್ರಪ್ಪ ಮಾತನಾಡಿ, ನಾಯಕ ಸಮಾಜದ  ಮಕ್ಕಳ ವಿದ್ಯಾಭ್ಯಾಸಕ್ಕಾಗಿ ್ಙ 5.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಶಾಲೆಯಲ್ಲಿ 6ನೇ ತರಗತಿಯಿಂದ ಪಿಯುವರೆಗೆ ಶಿಕ್ಷಣ ಪಡೆಯಬಹುದು. ಪಟ್ಟಣದಲ್ಲಿ ್ಙ 2.5 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಚಾಲನೆ ನೀಡಿದ್ದು, ಮುಂದಿನ ವಾಲ್ಮೀಕಿ ದಿನಾಚರಣೆಯನ್ನು ನೂತನ ಕಟ್ಟಡದಲ್ಲೇ ಆಚರಿಸಲಾಗುವುದು ಎಂದರು.

ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ  ಜಿ.ಎಚ್. ತಿಪ್ಪಾರೆಡ್ಡಿ, ಸರ್ಕಾರ ಎಸ್‌ಟಿ ಜನಾಂಗದ ಅಭಿವೃದ್ಧಿಗಾಗಿ ಅನೇಕ ರೀತಿಯ ನೆರವು ನೀಡುತ್ತಿದೆ. ್ಙ  25 ಲಕ್ಷ ವೆಚ್ಚದಲ್ಲಿ ಜನಾಂಗದ ಕೇರಿಗಳನ್ನು ಅಭಿವೃದ್ಧಿ ಪಡಿಸಲು ಪ್ರತಿ ತಾಲ್ಲೂಕಿಗೆ ್ಙ  1 ಕೋಟಿ ಅನುದಾನ ನೀಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಸಚಿವ ಆಸ್ನೋಟಿಕರ್ ಪಟ್ಟಣದಲ್ಲಿ ್ಙ  2.5 ಕೋಟಿ ವೆಚ್ಚದ ವಾಲ್ಮೀಕಿ ಭವನ ಮತ್ತು ್ಙ 3 ಕೋಟಿ ವೆಚ್ಚದ ಹಾಸ್ಟೆಲ್ ಕಟ್ಟಡಗಳಿಗೆ  ಶಂಕುಸ್ಥಾಪನೆ ನೆರವೇರಿಸಿದರು.

ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಜೆ. ರಂಗಸ್ವಾಮಿ, ಪಿ.ಆರ್. ಶಿವಕುಮಾರ್, ಪಾರ್ವತಮ್ಮ, ಭಾರತೀ ಕಲ್ಲೇಶ್, ವಾಲ್ಮೀಕಿ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿ, ಜಿ. ರಾಮಪ್ಪ, ಕೆ.ಸಿ. ರಮೇಶ್, ತಾಲ್ಲೂಕು ಪಂಚಾಯ್ತಿ  ಅಧ್ಯಕ್ಷೆ ಪ್ರೇಮಾ ಧನಂಜಯ, ಪುಟ್ಟೀಬಾಯಿ, ಸಿ. ರವಿ, ಸದಸ್ಯರಾದಸಿ. ಲವಮಧು, ಮೋಹನ್ ನಾಗರಾಜ್, ತಿಮ್ಮೇಶ್, ಶೇಖರಪ್ಪ, ಓಂಕಾರಸ್ವಾಮಿ, ಜಗದೀಶ್, ಮಾಜಿ ಶಾಸಕ ಪಿ. ರಮೇಶ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಗೀತಾ, ಲಿಂಗರಾಜು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.