ಹಿರಿಯೂರು: ರೈತರ ಮನವೊಲಿಸಿ ಸಾಲ ವಸೂಲಿ ಮಾಡಿ, ಆದರೆ ದೌರ್ಜನ್ಯದ ಮೂಲಕ ಸಾಲ ವಸೂಲಿ ಮಾಡಲು ಹೊರಟರೆ ರೈತರು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಎಚ್ಚರಿಕೆ ನೀಡಿದರು.ನಗರದ ಪಿಎಲ್ಡಿ ಬ್ಯಾಂಕ್ ಸಾಲ ಪಡೆದ ರೈತರಿಗೆ ಹರಾಜು ನೋಟೀಸ್ ನೀಡುತ್ತಿರುವುದರ ವಿರುದ್ಧ ಸೋಮವಾರ ನಡೆದ ಬ್ಯಾಂಕ್ ಮುತ್ತಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
60 ವರ್ಷದಲ್ಲಿ ಇಲ್ಲಿನ ಪಿಎಲ್ಡಿ ಬ್ಯಾಂಕ್, ರೈತರಿಗೆ ಒಟ್ಟಾರೆ ್ಙ200 ಕೋಟಿಸಾಲ ಕೊಡಲಾಗಿಲ್ಲ. ಶಶಿರುಯ್ಯ ಎಂಬ ಗುತ್ತಿಗೆದಾರನಿಗೆ ರಾಷ್ಟ್ರೀಕೃತ ಬ್ಯಾಂಕೊಂದು ್ಙ 7,168 ಕೋಟಿ ಸಾಲ ನೀಡಿದೆ. ಆ ವ್ಯಕ್ತಿಗೆ ಬ್ಯಾಂಕು ಯಾವುದೇ ನೋಟಿಸ್ ನೀಡಿಲ್ಲ. ಬ್ಯಾಂಕಿನ ನೋಟಿಸಿಗೆ ಹೆದರಿ ಯಾರೇ ರೈತ ಆತ್ಮಹತ್ಯೆ ಮಾಡಿಕೊಳ್ಳಬಾರದು. ಆತ್ಮಹತ್ಯೆ ಮಾಡಿಕೊಂಡ ರೈತನ ಸಂಸ್ಕಾರ ಮಾಡುವ ಮುಂಚೆ ರೈತ ಸಂಘಕ್ಕೆ ತಿಳಿಸಿ. ಶವವನ್ನು ಬ್ಯಾಂಕಿನ ಮುಂದಿಟ್ಟು ಚಳವಳಿ ನಡೆಸೋಣ. ವ್ಯವಸಾಯಕ್ಕೆ ಸಂಬಂಧಪಟ್ಟ ವಸ್ತುಗಳನ್ನು ಹರಾಜು ಹಾಕಲು ಕಾನೂನು-ಕಟ್ಟಳೆಗಳಲ್ಲಿ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಾಲ ಪಡೆದ ರೈತರಿಗೆ ಹರಾಜು ನೋಟೀಸ್ ನೀಡುವುದನ್ನು ಬ್ಯಾಂಕ್ ಕೈಬಿಡದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಆರನಕಟ್ಟೆ ಶಿವಕುಮಾರ್ ತಿಳಿಸಿದರು.
ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಪಿಡಿ ಕೋಟೆಯ ರೈತ ರಮೇಶನ ಸಾವಿನ ಹೊಣೆಯನ್ನು ಪಿಎಲ್ಡಿ ಬ್ಯಾಂಕ್ ಹೊರಬೇಕಿದೆ. ರೈತರ ಶೋಷಣೆ ನಿಲ್ಲದಿದ್ದರೆ, ಶೋಷಣೆ ಮಾಡುವವರನ್ನು ಸುಮ್ಮನೆ ಬಿಡಲಾಗದು ಎಂದು ತುಳಸೀದಾಸ್ ಎಚ್ಚರಿಸಿದರು.
ತಾಲ್ಲೂಕಿನಲ್ಲಿ 7,000 ಎಕರೆ ಭೂಮಿಯನ್ನು ಬಗರ್ಹುಕುಂ ಸಾಗುವಳಿ ಮಾಡಿರುವ 3,500 ರೈತರಿಗೆ ಜಮೀನು ಬಿಡುವಂತೆ ನೋಟೀಸ್ ಜಾರಿ ಮಾಡಿದೆ. ತಕ್ಷಣ ನೋಟೀಸ್ ಹಿಂಪಡೆಯಬೇಕು ಎಂದು ಕೆ.ಸಿ. ಹೊರಕೇರಪ್ಪ ಒತ್ತಾಯಿಸಿದರು.ರೈತ ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ, ಕೆ.ಟಿ. ತಿಪ್ಪೇಸ್ವಾಮಿ, ಸಿ. ಸಿದ್ದರಾಮಣ್ಣ, ಎ.ಯು. ನರೇಂದ್ರ, ವೀರಣ್ಣ, ಆರ್. ದಿವಾಕರ್, ತವಂದಿ ತಿಪ್ಪೇಸ್ವಾಮಿ, ಬುರುಜನರೊಪ್ಪ ತಿಪ್ಪೇಸ್ವಾಮಿ, ಇರ್ಫಾನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.