ADVERTISEMENT

ಪುರಸಭೆ ನಿರ್ಲಕ್ಷ್ಯ: ಸಮಿತಿಯಿಂದ ಅಭಿವೃದ್ಧಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST
ಪುರಸಭೆ ನಿರ್ಲಕ್ಷ್ಯ: ಸಮಿತಿಯಿಂದ ಅಭಿವೃದ್ಧಿ ಕಾರ್ಯ
ಪುರಸಭೆ ನಿರ್ಲಕ್ಷ್ಯ: ಸಮಿತಿಯಿಂದ ಅಭಿವೃದ್ಧಿ ಕಾರ್ಯ   

ಹಿರಿಯೂರು: ಪುರಸಭೆ ವ್ಯಾಪ್ತಿಯಲ್ಲಿನ ಕುವೆಂಪು ನಗರ ಬಡಾವಣೆಯಲ್ಲಿ 20 ವರ್ಷಗಳಿಂದ ರಸ್ತೆ, ಚರಂಡಿ ಅಭಿವೃದ್ಧಿಪಡಿಸದೇ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ, ಬಡಾವಣೆಯ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರೇ ಮುಂದೆ ನಿಂತು ಬಡಾವಣೆ ಅಭಿವೃದ್ಧಿಗೆ ಮುಂದಾದ ಘಟನೆ ಭಾನುವಾರ ನಡೆಯಿತು.

ಸಮಿತಿಯ ಅಧ್ಯಕ್ಷ ಜಿ. ಏಕಾಂತಪ್ಪ ಸುದ್ದಿಗಾರರ ಜತೆ ಮಾತನಾಡಿ, ಮಾಧ್ಯಮಗಳಲ್ಲಿ ಪುರಸಭೆಯ ವಿವಿಧ ಬಡಾವಣೆಗಳಲ್ಲಿ ಬಾಕ್ಸ್ ಚರಂಡಿ, ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಲಕ್ಷ ಲೆಕ್ಕದಲ್ಲಿ ಹಣ ಬಿಡುಗಡೆಯಾಗಿದೆ ಎಂದು ವರದಿಯಾಗುತ್ತಿದೆ. ಆದರೆ, ಕುವೆಂಪು ಬಡಾವಣೆಗೆ ಮಾತ್ರ ಒಂದು ಪೈಸೆ ಬಿಡುಗಡೆ ಮಾಡಿಲ್ಲ. ಹಲವು ಬಾರಿ ಪುರಸಭೆ ಅಧ್ಯಕ್ಷರಿಗೆ-ಮುಖ್ಯಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಬಡಾವಣೆ ನಿರ್ಮಾಣದ ನಂತರ ಉದ್ಯಾನಕ್ಕೆ ತಂತಿಬೇಲಿ ಹಾಕಿದ ಪುರಸಭೆ ನೆಲ ಸಮತಟ್ಟು ಮಾಡಲಿಲ್ಲ, ಗಿಡ ನೆಡಲಿಲ್ಲ. ಬೇರೆ ಯಾವುದೇ ಮೂಲಸೌಕರ್ಯ ನೀಡಿಲ್ಲ ಎಂದು ದೂರಿದರು.

ಬಡಾವಣೆ ತುಂಬೆಲ್ಲ ಮುಳ್ಳು ಪೊದೆ ಬೆಳೆದಿದೆ. ಚರಂಡಿಗಳು ಕಿತ್ತು ಹೋಗಿರುವ ಕಾರಣದಿಂದ ಕೊಚ್ಚೆ ತುಂಬಿದೆ. ಹಂದಿಗಳು ಸಾಕಷ್ಟು ಸಂಖ್ಯೆಯಲ್ಲಿ ವಾಸಿಸುತ್ತಿವೆ. ಪುರಸಭೆಯಿಂದ ತಮಗೆ ನ್ಯಾಯ ದೊರೆಯದು ಎಂಬ ಕಾರಣಕ್ಕೆ ಬಡಾವಣೆಯ ನಿವಾಸಿಗಳೆಲ್ಲ ಸೇರಿ ಹಣ ಸಂಗ್ರಹಿಸಿ ಜೆಸಿಬಿ ಯಂತ್ರ ಬಳಸಿ, ಉದ್ಯಾನದ ನೆಲವನ್ನು ಸಮತಟ್ಟುಗೊಳಿಸುವ ಹಾಗೂ ರಸ್ತೆಬದಿಯ ಪೊದೆ ತೆಗೆಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದು ಮಾಹಿತಿ ನೀಡಿದರು.ಎಚ್.ಎಸ್. ರಂಗನಾಥ್, ವಿ. ಕೃಷ್ಣಮೂರ್ತಿ, ಓಂಕಾರಪ್ಪ, ಡಿ. ದಾಸಣ್ಣ, ಎಸ್.ಎಂ. ಬಸವರಾಜ್, ಪಿ. ವೈ. ಮಲ್ಲಿಕಾರ್ಜುನ್, ಎಚ್.ಪಿ. ರವೀಂದ್ರನಾಥ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.