ADVERTISEMENT

ಪುರಸಭೆ ನಿರ್ಲಕ್ಷ್ಯ: ಸಾರ್ವಜನಿಕರ ಆಕ್ರೋಶ

ಹೊಸದುರ್ಗ: ಕಾಯಕಲ್ಪ ಕಾಣದ ಹದಗೆಟ್ಟ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:49 IST
Last Updated 16 ಡಿಸೆಂಬರ್ 2013, 5:49 IST

ಹೊಸದುರ್ಗ: ಪಟ್ಟಣದ 2 ಮತ್ತು 3ನೇ ಮುಖ್ಯ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿರುವ ಇಲ್ಲಿನ ಪುರಸಭೆ ವಿರುದ್ಧ ವ್ಯಾಪಾರಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಣ್ಣಿನ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಮೇಲೇಳುವ ದೂಳು ರಸ್ತೆ ಬದಿಯ ಎಲ್ಲ ವ್ಯಾಪಾರ ಕೇಂದ್ರಗಳಿಗೆ ಆವರಿಸುತ್ತದೆ. ಮುಖ್ಯ ರಸ್ತೆಯನ್ನು ಹೊರತು ಪಡಿಸಿದರೆ, ಪಟ್ಟಣದ ವಿವಿಧ ಬಡಾವಣೆಗಳ ರಸ್ತೆಗಳು ದುರಸ್ತಿಯಾಗುತ್ತಿಲ್ಲ ಎಂದು ವ್ಯಾಪಾರಸ್ಥರು ದೂರಿದ್ದಾರೆ.

ಪುರಸಭೆಯ ಚುನಾವಣೆ ಸಂದರ್ಭ, ರಸ್ತೆಗೆ ಡಾಂಬರ್‌ ಅಥವಾ ಕಾಂಕ್ರೀಟ್‌ ಹಾಕಲಾಗುವುದು ಎಂದು  ಅಭ್ಯರ್ಥಿಗಳು ಹಾಗೂ ಪುರಸಭೆ ಮುಖ್ಯಾಧಿಕಾರಿ ಭರವಸೆ ನೀಡಿದ್ದರು. ಚುನಾವಣೆ ಮುಗಿದು ಅಧಿಕಾರ ಸ್ವೀಕರಿಸಿ ಸುಮಾರು 8 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಪುರಸಭೆಯ ವಿವಿಧ ಕಾಮಗಾರಿಗಳಿಗೆ ಬಳಕೆಯಾಗುವ ಜೆಸಿಬಿ ರಿಪೇರಿಯಾಗದೇ ತುಕ್ಕು ಹಿಡಿಯುತ್ತಿದೆ. ಪೌರ ಕಾರ್ಮಿಕರು ಸಹ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಅನೇಕ ಬಡಾವಣೆಗಳಲ್ಲಿನ ಚರಂಡಿಗಳ ಸ್ವಚ್ಛತಾ ಕಾರ್ಯ ಆಗುತ್ತಿಲ್ಲ. ಕೆಲವು ಬಡಾವಣೆಗಳಲ್ಲಿ ಎಲ್ಲೆಂದರಲ್ಲಿ ಮನೆ ಹಾಗೂ ಗುಡಿಸಲುಗಳು ನಿರ್ಮಾಣವಾಗುತ್ತಿವೆ. ವಿದ್ಯುತ್‌ ದೀಪಗಳನ್ನು ಬೆಳಿಗ್ಗೆ 8ಗಂಟೆಯಾದರೂ ನಂದಿಸುತ್ತಿಲ್ಲ ಎಂದು ದೂರಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.