ಚಿತ್ರದುರ್ಗ: ಆರೋಗ್ಯ ಭಾಗ್ಯ ಯೋಜನೆಯನ್ನು ನಿವೃತ್ತ ಪೋಲಿಸ್ ಸಿಬ್ಬಂದಿಗೂ ವಿಸ್ತರಿಸಬೇಕು ಎಂದು ನಿವೃತ್ತ ಪೊಲೀಸ್ ಉಪ ನಿರೀಕ್ಷಕ ಬಿ.ಟಿ. ರುದ್ರಪ್ಪ ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಲೀಸರು ತಮ್ಮ ಬದುಕನ್ನು ಸಾರ್ವಜನಿಕರ ಸೇವೆಗಾಗಿ ಮುಡುಪಾಗಿಡುತ್ತಾರೆ. ಕರ್ತವ್ಯದಲ್ಲಿ ಆಕಸ್ಮಿಕವಾಗಿ ಮೃತಪಟ್ಟರೆ ಅವರ ಅವಲಂಬಿತ ಕುಟುಂಬಗಳಿಗೆ ಶೀಘ್ರ ಸರ್ಕಾರ ನೆರವು ನೀಡಬೇಕು. ಇಂದು ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪೊಲೀಸ್ ಸಿಬ್ಬಂದಿಯ ವೇತನ ಪರಿಷ್ಕರಿಸಬೇಕು. ಜತೆಯಲ್ಲಿ ಶ್ರಮ ಭತ್ಯೆಯನ್ನು ಸಹ ನೀಡಬೇಕು ಎಂದು ರುದ್ರಪ್ಪ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಆರೋಗ್ಯ ತಪಾಸಣೆಗೆ ರೂ 3,38,401 ವೆಚ್ಚ ಮಾಡಲಾಗಿದೆ. ಸಿಬ್ಬಂದಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ್ಙ 2 ಲಕ್ಷ ನೆರವು ನೀಡಲಾಗಿದೆ. ವೈದ್ಯಕೀಯ ವೆಚ್ಚಕ್ಕೆ ರೂ 84 ಸಾವಿರ ಮತ್ತು ಶವ ಸಂಸ್ಕಾರಕ್ಕೆ ್ಙ 30 ಸಾವಿರ ನೀಡಲಾಗಿದೆ. ಜತೆಗೆ ಆರೋಗ್ಯ ಭಾಗ್ಯ ಯೋಜನೆ ಅಡಿ 186 ಪೊಲೀಸ್ ಸಿಬ್ಬಂದಿಗೆ ರೂ 40 ಲಕ್ಷ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮವಸ್ತ್ರ ಇಲ್ಲದ ಪೋಲೀಸರು. ಈ ಹಿರಿಯರ ಅನುಭವ, ಮಾರ್ಗದರ್ಶನ ಇಂದಿನ ಯುವ ಪೊಲೀಸ್ ಸಿಬ್ಬಂದಿಗೆ ಅಗತ್ಯವಿದೆ ಎಂದರು.
ಚಿತ್ರದುರ್ಗದ ತಹಶೀಲ್ದಾರ್ ಎಂ.ಆರ್. ನಾಗರಾಜ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜ್ ಉಪಸ್ಥಿತರಿದ್ದರು.
ಡಿವೈಎಸ್ಪಿ ಗಂಗಯ್ಯ ಸ್ವಾಗತಿಸಿದರು. ಶಿವರಾಂ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.