ADVERTISEMENT

ಬರಗೂರು ರಾಮಚಂದ್ರಪ್ಪ ವರದಿ ಜಾರಿ ಮಾಡಿ

ಸಂದರ್ಶನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2014, 10:24 IST
Last Updated 15 ಫೆಬ್ರುವರಿ 2014, 10:24 IST

ಮೊಳಕಾಲ್ಮುರು: ‘ಮೋಹಕ ಮೊಳಕಾಲ್ಮುರು ರೇಷ್ಮೆಸೀರೆ ಕಾರ್ಯಸ್ಥಳ ಹಾಗೂ ಜೀನ್ಸ್‌ ಸಿದ್ಧ ಉಡುಪು ತಯಾರಿಕೆಯಲ್ಲಿ ಹೆಸರು ಮಾಡಿರುವ ಸ್ಥಳ ನೆರೆಯ ಆಂಧ್ರದ ತಾಲ್ಲೂಕು ಕೇಂದ್ರವಾದ ರಾಯದುರ್ಗ.

ಆಂಧ್ರದಲ್ಲಿ ಇದ್ದರೂ ಕನ್ನಡಿಗರನ್ನು ಹೆಚ್ಚಾಗಿ ಹೊಂದಿರುವ ರಾಯದುರ್ಗ ಪರೋಕ್ಷವಾಗಿ ರಾಜ್ಯದ ಜತೆ ಭಾವನಾತ್ಮಕ ಸಂಬಂಧ ಹೊಂದಿದೆ. ಇಂತಹ ರಾಯದುರ್ಗ ಫೆ. 15 ಹಾಗೂ 16ರಂದು 4ನೇ ಗಡಿ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗಲಿದೆ. ಸಮ್ಮೇಳನ ಅಧ್ಯಕ್ಷರಾಗಿರುವ ಸಾಹಿತಿ, ಶಿಕ್ಷಣ ಪ್ರೇಮಿ, ರಾಷ್ಟ್ರಪತಿ ಪದಕ ವಿಜೇತ ಡಾ.ವುಡೇ ಪಿ.ಕೃಷ್ಣ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿರುವ ಈ ಸಮಯದಲ್ಲಿ ‘ಪ್ರಜಾವಾಣಿ’ ಜತೆ ಹಂಚಿಕೊಂಡ ಕೆಲ ಅನಿಸಿಕೆಗಳು ಇಂತಿದೆ.

* ನಿಮ್ಮ ಹಿನ್ನೆಲೆ..?
ಆಂಧ್ರದ ಮಡಕಶಿರಾ ತಾಲ್ಲೂಕಿನ ಊಡೇ ಸ್ವಂತ ಗ್ರಾಮ. 1963 ಫೆ. 1 ಜನ್ಮದಿನ, ಹುಟ್ಟಿದ್ದು ಬೆಂಗಳೂರು, ವುಡೇ ಗ್ರಾಮ ಈಗ ಜನರು ಪೂರ್ಣವಾಗಿ ವಲಸೆ ಹೋಗಿರುವ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿಲ್ಲ. ಎಂಜಿನಿಯರಿಂಗ್‌ ಹಾಗೂ ಕಾನೂನು ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಬೆಂಗಳೂರು ವಿವಿ ಗೌರವ ಡಾಕ್ಟರೇಟ್‌ ನೀಡಿದೆ.

* ವೃತ್ತಿ, ಶೈಕ್ಷಣಿಕ, ಪ್ರಶಸ್ತಿ ವಿವರ?
ಪ್ರಸ್ತುತ ಬೆಂಗಳೂರಿನಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ರಾಜ್ಯ ಚಾರ್ಟೆಂಟ್‌ ಅಕೌಂಟೆಂಟ್ಸ್‌ ಸಂಘದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದೊಂದು ಉನ್ನತ ಪದವಿ. ರಾಜ್ಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷರಾಗಿ ಮಾಡಿದ ಸೇವೆ ಗುರುತಿಸಿ, 2012ರಲ್ಲಿ ರಾಷ್ಟ್ರಪತಿ ಪದಕ ನೀಡಲಾಗಿದೆ. ಅದಕ್ಕೂ ಮೊದಲು ರಾಜ್ಯಪ್ರಶಸ್ತಿ ಗೌರವ ಸಿಕ್ಕಿದೆ.

* ನೀವು ಕಂಡಂತೆ ಪ್ರಮುಖ ಗಡಿಭಾಗದ ಸಮಸ್ಯೆಗಳು ಹಾಗೂ ಪರಿಹಾರ?
ಆಂಧ್ರದಲ್ಲಿರುವ 84 ಕನ್ನಡ ಶಾಲೆಗಳ 17,400 ಮಕ್ಕಳಿಗೆ ಸಕಾಲಕ್ಕೆ ಪಠ್ಯಪುಸ್ತಕ ಲಭ್ಯವಾಗುತ್ತಿಲ್ಲ, ಈ ಹೊಣೆಯನ್ನು ಮುಂದಿನ ವರ್ಷದಿಂದ ಕರ್ನಾಟಕ ಸರ್ಕಾರ ಹೊರಬೇಕು. ಗಡಿಭಾಗದ ವಿದ್ಯಾರ್ಥಿಗಳಿಗೆ ವೈದ್ಯ, ತಾಂತ್ರಿಕ ಶಿಕ್ಷಣ ಸಿಇಟಿಯಲ್ಲಿ ಮೀಸಲಾತಿ ನೀಡಬೇಕು, ಪ್ರಾದೇಶಿಕ ಅಸಮತೋಲನ ಸರಿಪಡಿಸಲು ಡಾ.ಬರಗೂರು ರಾಮಚಂದ್ರಪ್ಪ ವರದಿ ಜಾರಿ ಮಾಡಬೇಕು.

* ಸಮ್ಮೇಳನ ಮೂಲಕ ಸರ್ಕಾರಕ್ಕೆ ಹಾಗೂ ಸಮಾಜಕ್ಕೆ ಯಾವ ಸಂದೇಶ ಕೊಡಲು ನಿರ್ಧರಿಸಿದ್ದೀರಿ?
ಕನ್ನಡ ಹಾಗೂ ತೆಲುಗಿನವರ ಬಾಂಧವ್ಯ ಮತ್ತಷ್ಟು ಚೆನ್ನಾಗಿರಲು ಅಂತರ ರಾಜ್ಯಮಟ್ಟದಲ್ಲಿ ‘ತುಲನಾತ್ಮಕ ಅಧ್ಯಯನ  ಕೇಂದ್ರ’   ಸ್ಥಾಪನೆಯಾಗಬೇಕು. ಗಡಿಭಾಗದ  ಅಭಿವೃದ್ಧಿಗೆ  ಶ್ರಮಿಸಿದ    ವ್ಯಕ್ತಿಗಳಿಗೆ ಪ್ರತಿವರ್ಷ  ‘ಗಡಿನಾಡ  ಕನ್ನಡಿಗ’ ಪ್ರಶಸ್ತಿ   ನೀಡಬೇಕು ಎಂದು ಆಗ್ರಹಪಡಿಸುತ್ತೇನೆ.

* ಸಮ್ಮೇಳನಲ್ಲಿ ನೀಮ್ಮ ವೈಯಕ್ತಿಕ ಹಕ್ಕೊತ್ತಾಯಗಳು?
ಇಡೀ ದೇಶದ ಕೃಷಿ ವ್ಯವಸ್ಥೆ ಹಾಗೂ ಪ್ರಾಕೃತಿಕ ಅಸಮತೋಲನೆ ತಪ್ಪಿಸಲು ಗಂಗಾ– ಕಾವೇರಿ ನದಿ ಜೋಡಣೆಯಾಗಬೇಕು. ಕನ್ನಡ ಸಂಘಟನೆಗಳು ನಾಡನ್ನು ಕಾವಲುನಾಯಿಗಳ ರೀತಿ ಕಾಪಾಡಲು ಪ್ರೇರೇಪಿಸಬೇಕು. ಯುವಜನಾಂಗ ಎಸ್ಎಂಎಸ್‌ ಸಂಸ್ಕೃತಿಯಿಂದ ಹೊರಬರಲು ಕಾಲೇಜು ಹಂತದಲ್ಲಿ ಸಾಹಿತ್ಯ ಪ್ರೇರಣೆ ಕಾರ್ಯ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.