ADVERTISEMENT

ಬಸ್ ನಿಲುಗಡೆಗೆ ನಿರಾಕರಿಸಿದ ನಿರ್ವಾಹಕನಿಗೆ ಜನರಿಂದ ಥಳಿತ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 5:20 IST
Last Updated 25 ಫೆಬ್ರುವರಿ 2012, 5:20 IST

ಭರಮಸಾಗರ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗೆ ಗ್ರಾಮದಲ್ಲಿ ನಿಲುಗಡೆ ನಿರಾಕರಿಸಿ ಅನುಚಿತವಾಗಿ ವರ್ತಿಸಿದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

ಗ್ರಾಮದಲ್ಲಿ ನಿಲುಗಡೆ ಇದ್ದರೂ ಬೈಪಾಸ್ ಮೂಲಕ ಬಸ್‌ಗಳು ಹೋಗುವುದನ್ನು ಖಂಡಿಸಿ ಗ್ರಾಮಸ್ಥರು ಅನೇಕ ಬಾರಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ಶುಕ್ರವಾರ ದಾವಣಗೆರೆಯಿಂದ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಒಬ್ಬರಿಗೆ ಮುಂಡರಗಿ ಡಿಪೊ ಬಸ್‌ನ ನಿರ್ವಾಹಕ ನಿಲುಗಡೆ ನಿರಾಕರಿಸಿದ್ದಾರೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ವಿದ್ಯಾರ್ಥಿಯನ್ನು ಥಳಿಸಿದ ನಿರ್ವಾಹಕ ಬಸ್ ನಿಲ್ಲಿಸದೆ ಬೈಪಾಸ್ ಮೂಲಕ ಗ್ರಾಮ ದಾಟಿ ಹೋಗಿದ್ದಾನೆ. ಮೊಬೈಲ್ ಮೂಲಕ ವಿದ್ಯಾರ್ಥಿ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದಾನೆ. ಕೂಡಲೆ ಗ್ರಾಮದ ಯುವಕರು ವಾಹನಗಳಲ್ಲಿ ತೆರಳಿ ಬಸ್ ಅಡ್ಡಗಟ್ಟಿ ಗ್ರಾಮಕ್ಕೆ ಕರೆತಂದಿದ್ದಾರೆ.

ವಿದ್ಯಾರ್ಥಿ ತನಗೆ ಪೆಟ್ಟು ಬಿದ್ದ ವಿಷಯ ತಿಳಿಸುತ್ತಿದ್ದಂತೆ ರೊಚ್ಚಿಗೆದ್ದ ಸಾರ್ವಜನಿಕರು ನಿರ್ವಾಹಕನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಬಳಿಕ ರಸ್ತೆ ತಡೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸ್ಥಳಕ್ಕೆ ಆಗಮಸಿದ ಜಿ.ಪಂ. ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.