ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ ಕೆರೆಗಳ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 6:09 IST
Last Updated 23 ಅಕ್ಟೋಬರ್ 2017, 6:09 IST

ಹಿರಿಯೂರು: ರಾಜ್ಯದಲ್ಲಿ 2018 ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೆರೆಗಳ ಪುನಶ್ಚೇತನ, ಮಂದಗತಿಯಲ್ಲಿ ನಡೆಯುತ್ತಿರುವ ನೀರಾವರಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಉಪಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಭರವಸೆ ನೀಡಿದರು.

ಮಳೆಗೆ ಕೋಡಿ ಹರಿದಿರುವ ತಾಲ್ಲೂಕಿನ ಉಡುವಳ್ಳಿ ಕೆರೆಗೆ ಶನಿವಾರ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ನಂತರ ಮಾತನಾಡಿದರು. ಉಡುವಳ್ಳಿ ಕೆರೆ 7 ವರ್ಷದ ನಂತರ ಕೋಡಿ ಹರಿದಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ಕೆರೆಗೆ ಪೂರಕನಾಲೆ ಕಾಮಗಾರಿ 8 ವರ್ಷದಿಂದ ಸ್ಥಗಿತಗೊಂಡಿತ್ತು. ಚುನಾವಣೆ ಹತ್ತಿರ ಬಂದಿರುವಾಗ ಮತ್ತೆ ಚಾಲನೆ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಕುರಿತಂತೆ ಸ್ಥಳೀಯ ಶಾಸಕರು ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರೆ ಎಂದು ದೂರಿದರು.

ಧರ್ಮಪುರವನ್ನು ತಾಲ್ಲೂಕು ಕೇಂದ್ರ ಮಾಡವಂತೆ ಒತ್ತಾಯಿಸಿ ಆ ಭಾಗದ ಜನ 90 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ  ಶಾಸಕರು ಧರಣಿ ನಿರತರನ್ನು ಭೇಟಿ ಮಾಡುವ ಸೌಜನ್ಯ ತೋರಿಲ್ಲ. ಚುನಾವಣೆ ಸಮೀಪಿಸುತ್ತಿದೆ ಎಂದು ಈಗ ರಸ್ತೆ ಮತ್ತಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ತಾಲ್ಲೂಕಿನ ಬಹುತೇಕ ಕೆರೆಗಳು ತುಂಬಿರುವ ಕಾರಣ ಕುಡಿಯುವ ಹಾಗೂ ಜಾನುವಾರಿನ ಮೇವಿನ ಸಮಸ್ಯೆ ನೀಗಲಿದೆ. ರೈತರು ನೀರನ್ನು ಅಪವ್ಯಯ ಮಾಡದೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಟಿ.ಆರ್.ರಾಜೇಶ್ವರಿ, ನಗರಸಭಾಧ್ಯಕ್ಷ ಟಿ.ಚಂದ್ರಶೇಖರ್, ಸದಸ್ಯರಾದ ಚಿರಂಜೀವಿ, ಬಿ.ಆರ್.ಮಂಜುನಾಥ್, ವಿಶ್ವನಾಥ್, ಆರಾಧ್ಯ, ಹರೀಶ್, ಗಿರೀಶ್, ಉಡುವಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಂಜುನಾಥ್,ಸದಸ್ಯರಾದ ಉಮೇಶ್, ಸಿದ್ದೇಶ್ ನಾಯ್ಕ್, ಮಹಲಿಂಗಪ್ಪ, ರಮೇಶ್, ರವಿಕುಮಾರ್, ದೊಡ್ಡರಂಗಪ್ಪ, ನಾಗೇಂದ್ರಪ್ಪ, ಕರಿಯಪ್ಪ, ಶಾಬುದ್ದೀನ್, ತೇಜಕುಮಾರ್, ದಾಸಪ್ಪ, ಶಾಂತಮ್ಮ, ರುದ್ರಪ್ಪ, ಕುಬೇರ, ವೆಂಕಟೇಶ್, ಮಾಯಸಂದ್ರ ಮಂಜು, ಯಶೋಧರ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.