ಚಿತ್ರದುರ್ಗ: ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತದ ಮೂಲಕ ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರಗಳ ಮೂಲಕ ಜ.8ರಿಂದ ಮೆಕ್ಕೆಜೋಳವನ್ನು ಖರೀದಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಲ್ಗೆ 880 ರೂ.ಗಳಲ್ಲಿ ಖರೀದಿಸಲಾಗುತ್ತದೆ. ಜಿಲ್ಲೆಯಲ್ಲಿ ಮೂರು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಮೆಕ್ಕೆಜೋಳವನ್ನು 880 ರೂಪಾಯಿಗಳ ಬೆಂಬಲ ಬೆಲೆ ಹಾಗೂ ಪ್ರತಿ 50 ಕೆ.ಜಿ. ಖಾಲಿ ಚೀಲಕ್ಕೆ 5 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಜ. 8ರಿಂದ ಖರೀದಿ ಕೇಂದ್ರಗಳ ಮೂಲಕ ಖರೀದಿಸಲಾಗುತ್ತಿದ್ದು, ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣ, ಭರಮಸಾಗರ ಉಪಮಾರುಕಟ್ಟೆ ಪ್ರಾಂಗಣ, ಚಿಕ್ಕಜಾಜೂರು ಉಪ ಮಾರುಕಟ್ಟೆ ಪ್ರಾಂಗಣ ಸೇರಿ 3 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೆಕ್ಕೆಜೋಳದ ಗುಣಮಟ್ಟ ಎಫ್ಎಕ್ಯೂ ಗುಣಮಟ್ಟವನ್ನು ಹೊಂದಿರಬೇಕು.
ಚೆನ್ನಾಗಿ ಒಣಗಿಸಿದ ಮೆಕ್ಕೆಜೋಳವನ್ನು ಮಾತ್ರ ಖರೀದಿಸಲಾಗುತ್ತದೆ. ಖರೀದಿ ಕೇಂದ್ರಕ್ಕೆ ತರುವ ಮುನ್ನ ಪ್ರಸಕ್ತ ಸಾಲಿನ ಕಂಪ್ಯೂಟರ್ ಪಹಣಿ ಪಡೆದು ಪ್ರಸಕ್ತ ಸಾಲಿನಲ್ಲಿ ಎಷ್ಟು ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ ಎನ್ನುವ ಬಗ್ಗೆ ರೈತರ ಭಾವಚಿತ್ರ ಸಮೇತ ಸಹಿಯನ್ನು ಗ್ರಾಮಲೆಕ್ಕಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರಿಂದ ದೃಢೀಕರಿಸಿದ ದಾಖಲೆಯನ್ನು ಹಾಜರುಪಡಿಸಬೇಕು. ಖರೀದಿ ಕೇಂದ್ರಗಳ ಮೂಲಕ 2011ರ ಮಾರ್ಚ್ ಅಂತ್ಯದವರೆಗೆ ಖರೀದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಂದು ಪರಿಸರ ಜಾಗೃತಿ ರ್ಯಾಲಿ
ಯುವವಕೀಲರ ಪರಿಸರ ಸಂರಕ್ಷಣಾ ವೇದಿಕೆ ವತಿಯಿಂದ ಜ.8ರಂದು ಬೆಳಿಗ್ಗೆ 9ಕ್ಕೆ ಪರಿಸರ ಜಾಗೃತಿ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಲು, ವಲಯ ಅರಣ್ಯಾಧಿಕಾರಿ ರಾಮಪ್ಪ, ವಕೀಲರ ಸಂಘದ ಕಾರ್ಯದರ್ಶಿ ಎ.ಸಿ. ರಘು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.