ADVERTISEMENT

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:31 IST
Last Updated 17 ಡಿಸೆಂಬರ್ 2013, 8:31 IST

ಭರಮಸಾಗರ: ಇಲ್ಲಿನ ಎಪಿಎಂಸಿ ಆವರಣದಲ್ಲಿ ಸೋಮವಾರ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲಾಯಿತು.

ರಾಜ್ಯ ಉಗ್ರಾಣ ನಿಗಮಕ್ಕೆ ಮೆಕ್ಕೆಜೋಳ ಖರೀದಿ ನಿರ್ವಹಣೆ ಹೊಣೆ  ವಹಿಸಿಕೊಡಲಾಗಿದೆ. ಸೋಮವಾರ ಖರೀದಿ ಕೇಂದ್ರದಲ್ಲಿ ತೂಕದ
ಯಂತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರಾದೇಶಿಕ ವ್ಯವಸ್ಥಾಪಕ ಎ.ಕೃಷ್ಣಮೂರ್ತಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಾರುಕಟ್ಟೆಯ ಸ್ಥಿರತೆ ಕಾಯುವ ಮೂಲಕ, ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿದ್ದು, ರೈತರು ಇದರ ಪ್ರಯೋಜನ ಪಡೆದು ಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಈ ಬಾರಿ ಸರ್ಕಾರ ಮೆಕ್ಕೆಜೋಳ ಕ್ವಿಂಟಲ್‌ಗೆ ರೂ 1,310 ನಿಗದಿ ಮಾಡಿದೆ. ನಿಯಮಾನುಸಾರ ರೈತರು ಕೇಂದ್ರಕ್ಕೆ ತರುವ ಮೆಕ್ಕೆಜೋಳದ ಮಾದರಿಯ ಗುಣಮಟ್ಟ ಪರೀಕ್ಷೆ ನಂತರ ಖರೀದಿ ನಡೆಸಲಾಗುವುದು. ಸರಕನ್ನು ಕೇಂದ್ರಕ್ಕೆ ತರಲು ದಿನಾಂಕ ನಿಗದಿ ಮಾಡಿ ಕೂಪನ್‌ ನೀಡಲಾಗುತ್ತದೆ. 50 ಕೆ.ಜಿ. ಚೀಲದಲ್ಲಿ ಮೆಕ್ಕೆಜೋಳ ತರಬೇಕು. ಖಾಲಿ ಚೀಲಕ್ಕೆ ₨ 5 ಪಾವತಿಸಲಾಗುವುದು. ಶೇ 14 ತೇವಾಂಶ ಕಡ್ಡಾಯ’ ಎಂದರು.

ಎಲ್ಲ ರೈತರಿಂದ ಎಕರೆಗೆ 25 ಕ್ವಿಂಟಲ್‌ನಂತೆ ಮೆಕ್ಕೆಜೋಳ ಖರೀದಿಸಲಾಗುತ್ತದೆ. ಕಂದಾಯ ಇಲಾಖೆಯ ಬೆಳೆ ದೃಢೀಕರಣದ ಜತೆಗೆ ಪಹಣಿ ನೀಡಬೇಕು. ಖರೀದಿಸಿದ ನಂತರ 15 ದಿನದೊಳಗೆ ರೈತರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ ಅವರು ಖರೀದಿ ಕೇಂದ್ರದಲ್ಲಿ ರೈತರು ಯಾವುದೇ ರೀತಿ ಶುಲ್ಕ, ಇತರ ಖರ್ಚು ಭರಿಸಬೇಕಿಲ್ಲ. ಮಧ್ಯವರ್ತಿಗಳ ನೆರವು ಪಡೆಯದೇ ನೇರವಾಗಿ ಕೇಂದ್ರದ ಅಧಿಕಾರಿಗಳ ಜತೆ ವ್ಯವಹರಿಸುವಂತೆ ಸಲಹೆ ನೀಡಿದರು.

ನೋಡೆಲ್‌್ ಅಧಿಕಾರಿ ಸೋಮಶೇಖರ್‌ ಗಾಂಜಿ, ಕೇಂದ್ರದ ಅಧಿಕಾರಿ ಟಿ.ಆರ್‌.ಲಕ್ಷ್ಮಣ್‌, ರೈತ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.