ADVERTISEMENT

ಮೊಳಕಾಲ್ಮುರು ತಾಲ್ಲೂಕು ಮೊಗಲಹಳ್ಳಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 9:40 IST
Last Updated 25 ಫೆಬ್ರುವರಿ 2011, 9:40 IST

ಮೊಳಕಾಲ್ಮುರು: ತಾಲ್ಲೂಕಿನ ಮೊಗಲಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಈಶ್ವರಸ್ವಾಮಿ ದೇವಸ್ಥಾನ ಫೆ. 28ರಂದು ಲೋಕಾರ್ಪಣೆ ಆಗಲಿದ್ದು,  ಪೂರಕ ಕಾರ್ಯಗಳು ಭರದಿಂದ ನಡೆಯುತ್ತಿದೆ.ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಸ್ಥಾನಕ್ಕೆ ಸುಮಾರು 300ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ಜಾಲಿ ಗಿಡಗಳ ಪೊದೆಯಲ್ಲಿ ಶಿವಲಿಂಗ ಕಾಣಿಸಿಕೊಂಡಿದ್ದನ್ನು ಕಂಡು ಗ್ರಾಮದ ಹಿರಿಯರು ಲಿಂಗಕ್ಕೆ ಸಣ್ಣ ದೇವಸ್ಥಾನ ಕಟ್ಟಿಸಿ ಪೂಜಿಸಲು ಆರಂಭಿಸಿದರು.

ನಂತರ 1962ರಲ್ಲಿ ದೇವಸ್ಥಾನ ಅಭಿವೃದ್ಧಿಪಡಿಸಲಾಯಿತು. ಆದರೆ, ದೇವಸ್ಥಾನ ಇತ್ತೀಚಿನ ದಿನಗಳಲ್ಲಿ ಶಿಥಿಲವಾಗಿದ್ದ ಪರಿಣಾಮ ನೂತನವಾಗಿ ನಿರ್ಮಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.ಕಾರ್ಯಕ್ರಮದ ಅಂಗವಾಗಿ 27ರಂದು ಪ್ರಮುಖ ಬೀದಿಗಳಲ್ಲಿ ಪೂರ್ಣಕುಂಭ ಮೆರವಣಿಗೆ, ಗ್ರಾಮ ದೇವತಾ ದೇವಾಲಯ ಪ್ರವೇಶ, ವಿಶ್ವಶಾಂತಿಗಾಗಿ ಮಹಾಸಂಕಲ್ಪ ಸೇರಿದಂತೆ ರಾತ್ರಿ ಇಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 28ರಂದು ಮುಂಜಾನೆ 4ಕ್ಕೆ  ದೇವರ ಪ್ರತಿಷ್ಠಾಪನೆ ಕಾರ್ಯ ಜರುಗಲಿದೆ. ಸಿದ್ದಯ್ಯನ ಕೋಟೆ ಶಾಖಾಮಠದ ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.  ಕಾರ್ಯಕ್ರಮವನ್ನು ಸಚಿವ ಜಿ. ಕರುಣಾಕರ ರೆಡ್ಡಿ ಉದ್ಘಾಟಿಸುವರು.

ಶಾಸಕ ಎನ್.ವೈ. ಗೋಪಾಕೃಷ್ಣ ಅಧ್ಯಕ್ಷತೆ ವಹಿಸುವರು.  ಸಂಸದ ಜನಾರ್ದನ ಸ್ವಾಮಿ, ಮಾಜಿ ಸಂಸದ ಎನ್.ವೈ. ಹನುಮಂತಪ್ಪ, ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ, ಜಿ.ಪಂ. ಅಧ್ಯಕ್ಷ ಮಹಾಲಿಂಗಪ್ಪ, ಉಪಾಧ್ಯಕ್ಷೆ ಆರ್. ವಿಜಯಮ್ಮ, ಎಚ್.ಟಿ. ನಾಗರೆಡ್ಡಿ, ಮಾರಕ್ಕ, ರತ್ನಮ್ಮ ಮಹೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ದೇವಸ್ಥಾನ ವಿನ್ಯಾಸ ಕಾರ್ಯವನ್ನು ದಾವಣಗೆರೆಯ ‘ಶಿಲ್ಪಿ ಟಿ. ಸೋಮೇಶ್’ ನಿರ್ವಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.