ADVERTISEMENT

ಮೊಳಕಾಲ್ಮುರು ಪಟ್ಟಣ ಪಂಚಾಯ್ತಿ ಬಿಎಸ್ಆರ್‌ ಕಾಂಗ್ರೆಸ್ ತೆಕ್ಕೆಗೆ !

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 6:07 IST
Last Updated 13 ಮಾರ್ಚ್ 2014, 6:07 IST

ಮೊಳಕಾಲ್ಮುರು: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಪಟ್ಣಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದಿದ್ದು, ಬಿಎಸ್‌ಆರ್‌ ಕಾಂಗ್ರೆಸ್ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಒಟ್ಟು 15 ಸದಸ್ಯರನ್ನು ಹೊಂದಿರುವ ಈ ಪಟ್ಟಣ ಪಂಚಾಯ್ತಿಗೆ 6 ಕಾಂಗ್ರೆಸ್‌, 5 ಬಿಎಸ್‌ಆರ್‌ ಕಾಂಗ್ರೆಸ್, ಇಬ್ಬರು ಪಕ್ಷೇತರರು ಹಾಗೂ ತಲಾ ಒಂದು ಜೆಡಿಎಸ್‌, ಒಂದು ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಯಾವ ಪಕ್ಷಕ್ಕೂ ಅಧಿಕಾರ ಪಡೆಯಲು ಬಹುಮತ ಇಲ್ಲದ ಕಾರಣ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಎಸ್ಆರ್‌
ಕಾಂಗ್ರೆಸ್‌ ಪರವಾಗಿ ಅನಿತಾ ಪುರುಷೋತ್ತಮ, ಕಾಂಗ್ರೆಸ್‌ನಿಂದ ಕೌಸರ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಎಸ್‌ಆರ್‌ನಿಂದ ಶಿವಮೂರ್ತಿ, ಕಾಂಗ್ರೆಸ್‌ನಿಂದ ಎಂ.ಎಸ್.ರಘು ನಾಮಪತ್ರ ಸಲ್ಲಿಸಿದ್ದರು. ಆಯ್ಕೆಯಲ್ಲಿ ಅನಿತಾ ಮತ್ತು ಶಿವಮೂರ್ತಿ ತಲಾ 10 ಮತಗಳನ್ನು, ಕೌಸರ್ ಮತ್ತು ಎಂ.ಎಸ್‌.ರಘು ಏಳು ಮತ ಪಡೆದರು ಎಂದು ಮೂಲಗಳು ತಿಳಿಸಿವೆ.

ಬಿಎಸ್ಆರ್‌ ಪರವಾಗಿ ಸಂಸತ್‌ ಸದಸ್ಯ ಜನಾರ್ದನಸ್ವಾಮಿ, ಶಾಸಕ ನೇರ್‍ಲಗುಂಟೆ ತಿಪ್ಪೇಸ್ವಾಮಿ, ಬಿಜೆಪಿ ಸದಸ್ಯ ರಾಜಶೇಖರ ಗಾಯಕವಾಡ್‌ ಮತ್ತು ಜೆಡಿಎಸ್ ಸದಸ್ಯೆ ಉಲ್ಫತ್‌ ಉನ್ನೀಸಾ, ಪಕ್ಷೇತರ ಸದಸ್ಯೆ ವದ್ದಿ ಸರೋಜಮ್ಮ ಮತ ಹಾಕಿದರು. ತಹಶೀಲ್ದಾರ್‌ ನಿಸ್ಸಾರ್‌ ಅಹಮದ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ನಂತರ ನಡೆದ ವಿಜಯೋತ್ಸವದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್‌.ಟಿ.ನಾಗರೆಡ್ಡಿ, ತಾ.ಪಂ. ಅಧ್ಯಕ್ಷ  ಶ್ರೀಕಾಂತರೆಡ್ಡಿ, ಎಂ.ವೈ.ಟಿ.ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ನರೇಂದ್ರನಾಥ್‌, ಕ್ಷೇತ್ರಾಧ್ಯಕ್ಷ ಆರ್‌.ಜಿ. ಗಂಗಾಧರಪ್ಪ, ಜಿಂಕಲು ಬಸವರಾಜು, ಜಗಳೂರಯ್ಯ, ಅಬ್ದುಲ್‌ ಸುಬಾನ್‌ಸಾಬ್‌, ಮಾರನಾಯಕ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.