ADVERTISEMENT

ರಾಜ್ಯಹೆದ್ದಾರಿ ಕಾಮಗಾರಿ ಸ್ಥಗಿತ

ಮಲ್ಪೆ-ಮೊಳಕಾಲ್ಮುರು ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿ

ಪ್ರಜಾವಾಣಿ ವಿಶೇಷ
Published 15 ಜೂನ್ 2013, 11:02 IST
Last Updated 15 ಜೂನ್ 2013, 11:02 IST
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮಲ್ಪೆ-ಮೊಳಕಾಲ್ಮುರು ರಾಜ್ಯಹೆದ್ದಾರಿ ಕಾಮಗಾರಿ ಸ್ಥಗಿತವಾಗಿರುವ ದೃಶ್ಯ.
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮಲ್ಪೆ-ಮೊಳಕಾಲ್ಮುರು ರಾಜ್ಯಹೆದ್ದಾರಿ ಕಾಮಗಾರಿ ಸ್ಥಗಿತವಾಗಿರುವ ದೃಶ್ಯ.   

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ನಡೆಯುತ್ತಿರುವ ಮೊಳಕಾಲ್ಮುರು- ಮಲ್ಪೆ ರಾಜ್ಯ ಹೆದ್ದಾರಿ ಕಾಮಗಾರಿ ಕಳೆದ ಕೆಲ ದಿನಗಳಿಂದ ಸ್ಥಗಿತವಾಗುವ ಮೂಲಕ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಲೋಕೋಪಯೋಗಿ ಮತ್ತು ಬಂದರು ಅಭಿವೃದ್ಧಿ ಇಲಾಖೆ ರಸ್ತೆ ಕಾಮಗಾರಿ ಹೊಣೆ ಹೊತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 17.4 ಕಿ.ಮೀ. ರಸ್ತೆ ಮಾಡಬೇಕಾಗಿದ್ದು, ಇದಕ್ಕಾಗಿ ರೂ 5.60 ಕೋಟಿ ಅನುದಾನ ನಿಗದಿ ಮಾಡಲಾಗಿದೆ.

ಒಟ್ಟು 11 ತಿಂಗಳಲ್ಲಿ ಈ ಕಾಮಗಾರಿಯನ್ನು ಅಂದರೆ ಆಗಸ್ಟ್ ವೇಳೆಗೆ ಮುಗಿಸಬೇಕಾಗಿದೆ. 17.4 ಕಿ.ಮೀ. ರಸ್ತೆ ಪೈಕಿ 5.5 ಮೀಟರ್ ಅಗಲವಿದ್ದ ಕೊಂಡ್ಲಹಳ್ಳಿ- ಕೋನಸಾಗರ ಮಧ್ಯದ ಸುಮಾರು 7 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣವಾಗಿದೆ.

ಉಳಿದ ಕಡೆ ಇರುವ 3.5 ಮೀಟರ್ ರಸ್ತೆ ಅಗಲವನ್ನು 5.5 ಮೀಟರ್‌ಗೆ ಹೆಚ್ಚಳ ಮಾಡುವ ಕಾರ್ಯ ಪ್ರಗತಿಯಲ್ಲಿದೆ, ಕಾಮಗಾರಿ ವಿಳಂಬ ಬಗ್ಗೆ ದೂರುಗಳು ಬಂದ ಕಾರಣ ಗುತ್ತಿಗೆದಾರರಿಗೆ ನೊಟೀಸ್ ಸಹ ಜಾರಿ ಮಾಡಲಾಗಿದ್ದು ಒಂದು ವಾರದ ಒಳಗಾಗಿ ಕಾರ್ಯ ಆರಂಭಿಸುವುದಾಗಿ ಹೇಳಿದ್ದಾರೆ ಎಂದು ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೀರಭದ್ರಪ್ಪ ತಿಳಿಸಿದರು.

ರಸ್ತೆ ಕಾಮಗಾರಿ ನಡೆಯುತ್ತಿರುವ ಕಡೆ ರಸ್ತೆ ಬದಿಗಳನ್ನು ಅಗಲ ಮಾಡಿ ಮೇಲ್ಬಾಗದಲ್ಲಿ ಕಲ್ಲುಗಳನ್ನು ಇಡಲಾಗಿದೆ, ಕೆಲವೆಡೆ ಮಣ್ಣು ಹಾಕಿ ಹಾಗೆಯೇ ಬಿಡಲಾಗಿದೆ, ಪರಿಣಾಮ ನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ನೂರಾರು ವಾಹನಗಳು ತೊಂದರೆಪಟ್ಟು ಸಂಚರಿಸುತ್ತಿದೆ. ಕೆಲವೆಡೆ ರಸ್ತೆ ಅಪಘಾತ ವಲಯವಾಗಿ ಕೂಡ ಮಾರ್ಪಟ್ಟಿದೆ ಎಂದು ವಾಹನ ಚಾಲಕರು ದೂರುತ್ತಾರೆ.

ಈ ಬಗ್ಗೆ ಮಾಹಿತಿ ನೀಡಿದ ಈ ರಸ್ತೆ ನಿರ್ಮಾಣ ಗುತ್ತಿಗೆದಾರ ಮತ್ತು ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ಕೆ.ಇಸ್ಮಾಯಿಲ್, `ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವುದು ಸತ್ಯ, ಆದರೆ ಇದರಲ್ಲಿ ನಮ್ಮ ತಪ್ಪು ಇಲ್ಲ, ಸರ್ಕಾರ ಕಲ್ಲು ಗಣಿಗಾರಿಕೆ ಕಾನೂನುಗಳನ್ನು ಬಿಗಿ ಮಾಡಿರುವ ಹಿನ್ನೆಲೆಯಲ್ಲಿ ಈ ಭಾಗದ ಭೈರಾಪುರ, ಗೌರಸಮುದ್ರ, ಅಬ್ಬೇನಹಳ್ಳಿ ಮುಂತಾದ ಕಡೆ ಕೆಲಸ ಮಾಡುತ್ತಿದ್ದ ಜಲ್ಲಿ ಕ್ರಷರ್‌ಗಳನ್ನು ಮುಚ್ಚಲಾಗಿದೆ. ಪರಿಣಾಮ ಜಲ್ಲಿಗಾಗಿ ನೆರೆಯ ಆಂಧ್ರಪ್ರದೇಶಕ್ಕೆ ಹೋಗಬೇಕಾಗಿದೆ, ಇದು ಈ ಒಂದು ರಸ್ತೆ ಸಮಸ್ಯೆಯಲ್ಲ ಎಲ್ಲಾ ಕಡೆ ಇದೇ ಪರಿಸ್ಥಿತಿ ಎದುರಾಗಿದೆ ಎಂದರು.

ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸ್ಥಳ ಭೇಟಿ ಮಾಡಿ ವಾಸ್ತವ ಸಮಸ್ಯೆ ಅರಿತು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.