ಹೊಳಲ್ಕೆರೆ: ಕೇಂದ್ರ ಸರ್ಕಾರ ಗುಟ್ಕಾ ಸ್ಯಾಷೇ ನಿಷೇಧ ಮಾಡಿರುವ ಕ್ರಮವನ್ನು ವಿರೋಧಿಸಿ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ಚನ್ನಗಿರಿ ಹಾಗೂ ತಾಲ್ಲೂಕು ಶಾಖೆಗಳ ಸದಸ್ಯರು ಮತ್ತು ರೈತರು ಸೋಮವಾರ ತಾಲ್ಲೂಕಿನ ರಾಮಗಿರಿಯಲ್ಲಿ ರೈಲು ಸಂಚಾರ ತಡೆ ಚಳವಳಿ ನಡೆಸಿದರು.
ಗುಟ್ಕಾ ಸ್ಯಾಷೇ ನಿಷೇಧದಿಂದ ಅಡಿಕೆ ಬೆಲೆ ಕುಸಿದಿದೆ. ಪ್ಲಾಸ್ಟಿಕ್ ಸ್ಯಾಷೇ ನಿಷೇಧಿಸಿರುವುದು ಪರೋಕ್ಷವಾಗಿ ಕೃಷಿ ಉತ್ಪನ್ನವಾದ ಅಡಿಕೆಯನ್ನೇ ನಿಷೇಧಿಸಿದಂತೆ. ಅಡಿಕೆ ಧಾರಣೆ ಕುಸಿತದಿಂದ ಈಗಾಗಲೇ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಅಡಿಕೆ ಬೆಳೆಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುತ್ತವೆ. ಅಡಿಕೆಯನ್ನೇ ನಂಬಿ ಲಕ್ಷಾಂತರ ರೂಪಾಯಿ ಸಾಲ ಮಾಡಿರುವ ರೈತರು ಆತ್ಮಹತ್ಯೆಯ ದಾರಿಹಿಡಿದರೂ ಆಶ್ಚರ್ಯವಿಲ್ಲ. ಹೀಗೇನಾದರೂ ಆದರೆ, ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಅಡಿಕೆ ಆರೋಗ್ಯಕ್ಕೆ ಒಳ್ಳೆಯದು ಎಂದು ಸಂಶೊಧನೆಗಳಿಂದ ದೃಢಪಟ್ಟಿದೆ. ಮಂಗಳ ಕಾರ್ಯಗಳಲ್ಲಿ ಅಡಿಕೆ ಬೇಕೇಬೇಕು. ಆದರೆ, ಬೆಲೆ ಕುಸಿತದಿಂದ ರೈತ ಕಂಗಾಲಾಗಿದ್ದು, ಮುಂದೆ ಅಡಿಕೆ ಬೆಳೆಯುವುದನ್ನೇ ನಿಲ್ಲಿಸಿದರೆ ಆಶ್ಚರ್ಯವಿಲ್ಲ. ಸರ್ಕಾರಕ್ಕೆ ಅಡಿಕೆ ವಹಿವಾಟಿನಿಂದ ಪ್ರತಿವರ್ಷ ಸಾವಿರಾರು ಕೋಟಿ ತೆರಿಗೆ ಬರುತ್ತದೆ. ಕೂಲಿ ಕಾರ್ಮಿಕರಿಗೂ ತೋಟಗಳಲ್ಲಿ ಕೆಲಸ ದೊರೆಯುವುದರಿಂದ ನಿರುದ್ಯೋಗವೂ ಕಡಿಮೆಯಾಗಲಿದೆ. ಆದ್ದರಿಂದ ಸರ್ಕಾರ ತಕ್ಷಣವೇ ಬೆಲೆ ಏರಿಕೆಗೆ ಕ್ರಮಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.
ಪ್ಲಾಸ್ಟಿಕ್ ನಿಷೇಧ ಕುರಿತು ನಮ್ಮ ವಿರೋಧ ಇಲ್ಲ. ದೇಶದಲ್ಲಿ 1.2 ಕೋಟಿ ಜನಸಂಖ್ಯೆ ಇದ್ದು, ಪ್ರತಿದಿನ ಸುಮಾರು 1ಲಕ್ಷ ಶಾಂಪೂ ಸ್ಯಾಷೇಗಳು ಮಾರಾಟವಾಗುತ್ತವೆ.ಪ್ಲಾಸ್ಟಿಕ್ನಿಂದಲೇ ತಯಾರಾದ ಲಕ್ಷಾಂತರ ಹಾಲಿನ ಪ್ಯಾಕೆಟ್, ಕೈ ಚೀಲಗಳು, ಔಷಧಿ, ಚಾಕೊಲೇಟ್, ತಿಂಡಿ ಪೊಟ್ಟಣಗಳು, ಪೈಪ್, ಮನೆಬಳಕೆ ವಸ್ತುಗಳು ಖರ್ಚಾಗುತ್ತವೆ. ಆದರೆ, ಸರ್ಕಾರ ಕೇವಲ ಗುಟ್ಕಾ ಸ್ಯಾಷೇ ನಿಷೇಧಿಸಿರುವುದು ನ್ಯಾಯವಲ್ಲ. ಬೇಕಾದರೆ ಎಲ್ಲಾ ಪ್ಲಾಸ್ಟಿಕ್ ವಸ್ತುಗಳನ್ನೂ ನಿಷೇಧಿಸಲಿ ಎಂದು ರೈತರು ಒತ್ತಾಯಿಸಿದರು.
ಪ್ರತಿಭಟನಾಕಾರರು ಹುಬ್ಬಳ್ಳಿ -ಬೆಂಗಳೂರು ಪ್ರಯಾಣಿಕರ ರೈಲನ್ನು ಕೆಲಕಾಲ ತಡೆದರು.ಚನ್ನಗಿರಿ ತಾಲ್ಲೂಕು ರೈತಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಕುಮಾರಸ್ವಾಮಿ, ತಾಲ್ಲೂಕು ರೈತಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಬಸವಂತಪ್ಪ, ಚಂದ್ರಪ್ಪ ಮತ್ತು ನೂರಾರು ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.