ADVERTISEMENT

ವಿಕಲಚೇತನ ಮಕ್ಕಳಿಗೆ ಪ್ರೋತ್ಸಾಹ ಅಗತ್ಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 10:20 IST
Last Updated 4 ಜನವರಿ 2011, 10:20 IST

ಹಿರಿಯೂರು: ದೃಷ್ಠಿದೋಷ, ಬುದ್ದಿ ಮಾಂದ್ಯತೆ ಮೊದಲಾದ ದೋಷಗಳಿಂದ ಕೂಡಿರುವ ಮಕ್ಕಳಿಗೆ ಸಮಾಜದ ಅನುಕಂಪಕ್ಕಿಂತ ಪ್ರೋತ್ಸಾಹ ಬೇಕಿದೆ ಎಂದು ಕ್ಷೇತ್ರ ಸಂಪನ್ಮೂಲಾಧಿಕಾರಿ ಡಿ. ನರಸಿಂಹಪ್ಪ ತಿಳಿಸಿದರು. ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆವರಣದಲ್ಲಿ ಶುಕ್ರವಾರ ವಿಶೇಷ ಅಗತ್ಯವುಳ್ಳ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕ್ರೀಡಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲ ಚೇತನ ಮಕ್ಕಳಿಗೂ ಕೂಡ ಸಾಮಾನ್ಯ ಮಕ್ಕಳಂತೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಪೋಷಕರು, ಶಿಕ್ಷಕರು ಇಂತಹ ಮಕ್ಕಳ ಮನಸ್ಸಿಗೆ ಘಾಸಿಯಾಗುವಂತಹ ಯಾವುದೇ ಮಾತುಗಳನ್ನು ಆಡಬಾರದು. ತಾವೂ ಇತರೆ ಸಾಮಾನ್ಯ ಮಕ್ಕಳಿಗೆ ಕಡಿಮೆ ಇಲ್ಲ ಎನ್ನುವಂತಹ ಆತ್ಮವಿಶ್ವಾಸ ಮೂಡಿಸಬೇಕು ಎಂದು ಅವರು ಕರೆ ನೀಡಿದರು.

ದೃಷ್ಟಿದೋಷ ಇರುವ ಮಕ್ಕಳಿಗೆ ಮಡಿಕೆ ಒಡೆಯುವುದು, ಶ್ರವಣ ಹಾಗೂ ಮಾತಿನ ವೈಕಲ್ಯ ಇರುವ ಮಕ್ಕಳಿಗೆ ಗುಂಡು ಎಸೆತ, ಬುದ್ಧಿ ದೋಷ ಇರುವ ಮಕ್ಕಳಿಗೆ ಸ್ಮರಣ ಪರೀಕ್ಷೆ ಹಾಗೂ ಎಲ್ಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಚ್. ರವೀಂದ್ರ, ಟಿ. ಯಶೋಧರ, ಕೆ.ರಾಜು, ಟಿ. ಜಯರಾಮಯ್ಯ, ಚನ್ನಕೇಶವಗೌಡ, ಎಂ. ರುದ್ರಯ್ಯ, ಎಂ. ರಮೇಶನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

ಕುವೆಂಪು ಮನೆ ದುರ್ಬಳಕೆ: ಖಂಡನೆ

ಚಿತ್ರದುರ್ಗ: ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿ ಬೆಳೆದ ತಾಣವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿರುವುದನ್ನು ಸತ್ಯಮೇವ ಜಯತೇ ಯುವಶಕ್ತಿ ಸಂಘ ಖಂಡಿಸಿದೆ.
ಕುಪ್ಪಳ್ಳಿಯ ಸುಂದರ ಪರಿಸರದಲ್ಲಿ ಬೆಳೆದಿದ್ದರಿಂದಲೆ ಮಹಾನ್ ವ್ಯಕ್ತಿಯಾಗಿ ಹೊರಹೊಮ್ಮಿದರು. ಆದ್ದರಿಂದ, ಅಲ್ಲಿನ ಪರಿಸರ ಉಳಿವಿಗೆ ಸರ್ಕಾರ ಮುಂದಾಗಬೇಕು ಎಂದು ಸಂಘದ ಅಧ್ಯಕ್ಷ ವದ್ದಿಕೆರೆ ಪ್ರತಾಪ್ ಜೋಗಿ, ಉಪಾಧ್ಯಕ್ಷ ಅಶೋಕ್ ಬೆಳಘಟ್ಟ ಮತ್ತಿತರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.