ADVERTISEMENT

ವೀರಶೈವ ಲಿಂಗಾಯತ ನಮೂದಿಸಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 10:10 IST
Last Updated 17 ಜನವರಿ 2011, 10:10 IST

ಚಿತ್ರದುರ್ಗ: ಮುಂಬರುವ ಜನಗಣತಿಯ ಧರ್ಮದ ಕಾಲಂನಲ್ಲಿ ಸಮಾಜ ಬಾಂಧವರು ವೀರಶೈವ-ಲಿಂಗಾಯತ ಎಂದೇ ನಮೂದಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭೆ ಕರೆ ನೀಡಿದೆ.

ರಾಷ್ಟ್ರದಲ್ಲಿ ವೀರಶೈವರು 3 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಅಲ್ಪಸಂಖ್ಯಾತರಿಗೆ ದೊರೆಯುವ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರದ ಸೌಲಭ್ಯಗಳಿಂದ ಸಮಾಜ ವಂಚಿತವಾಗಿದೆ. ಸಮಾಜ ಬಾಂಧವರು ಜನಗಣತಿ ಸಂದರ್ಭದಲ್ಲಿ ವೀರಶೈವ -ಲಿಂಗಾಯತ ಎಂದು ನಮೂದಿಸಬೇಕು. ಎಲ್ಲ ಮಠಾಧೀಶರು ಇದಕ್ಕೆ ಬೆಂಬಲ ನೀಡಿದ್ದಾರೆ ಎಂದು  ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ವಾಗೀಶಪ್ರಸಾದ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆದರೆ, ಜನಗಣತಿ ಅಧಿಕಾರಿಗಳು ವೀರಶೈವ ಲಿಂಗಾಯತ ಎಂದು ಹೆಸರು ಹೇಳಿದ್ದರೂ ಹಿಂದೂ ಲಿಂಗಾಯತ ಎಂದು ನಮೂದಿಸುತ್ತಿರುವುದು ಕಂಡು ಬಂದಿದೆ ಎಂದು ಅವರು ದೂರಿದರು.

ಈಗಾಗಲೇ ಮಹಾಸಭೆ ವತಿಯಿಂದ ಖಚಿತ ಜನಸಂಖ್ಯೆ ತಿಳಿದುಕೊಳ್ಳಲು ಪರ್ಯಾಯ ಜನಗಣತಿ ಕೈಗೊಳ್ಳಲಾಗಿದೆ. ಸಮಾಜದಲ್ಲಿ ಕೃಷಿಕರು, ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ನಾವು ಯಾವುದೇ ಸಮಾಜವನ್ನು ವಿರೋಧಿಸುವುದಿಲ್ಲ. ಎಲ್ಲರನ್ನೂ ಸಮಾಜ ಪ್ರೀತಿಸುತ್ತ ಬಂದಿದೆ. ಆದರೆ, ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿಯಿಂದ ಸಮಾಜದ ಜನಪ್ರತಿನಿಧಿಗಳಿಗೆ ಅನ್ಯಾಯವಾಗುತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ದಿವಂಗತ ನಿಜಲಿಂಗಪ್ಪ ಅವರ ಹೆಸರಿನಲ್ಲಿ ಅಂತರ್‌ರಾಷ್ಟ್ರೀಯ ಪ್ರಶಸ್ತಿ ಸ್ಥಾಪಿಸಬೇಕು ಮತ್ತು ಚಿತ್ರದುರ್ಗ ಜಿಲ್ಲೆಗೆ ನಿಜಲಿಂಗಪ್ಪ ಎಂದು ನಾಮಕರಣ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಮಾರ್ಚ್ 5 ಮತ್ತು 6ರಂದು ಹರಳಯ್ಯ ಮಾದರಸರ ಹುತಾತ್ಮರ ದಿನಾಚರಣೆಯನ್ನು ಬಸವ ಕಲ್ಯಾಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಮುಖಂಡರಾದ ಕೆ.ಎಂ. ಚಂದ್ರಶೇಖರಪ್ಪ, ಪಿ.ಕೆ. ಕುಮಾರಸ್ವಾಮಿ, ಷಣ್ಮುಖಪ್ಪ ಹಾಜರಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.