ಮೊಳಕಾಲ್ಮುರು: ಕಂಬಗಳಿದ್ದರೂ ಬೀದಿ ದೀಪಗಳಿಲ್ಲ, ನಲ್ಲಿಯಲ್ಲಿ ನೀರು ಬರು ತ್ತಿಲ್ಲ, ರಾತ್ರಿ ವಿಷಜಂತುಗಳ ಕಾಟ, ಶವ ಸುಡುವಾಗ ಕೆಟ್ಟ ವಾಸನೆ ಹರಡಿ ನಿವಾಸಿಗಳಿಗೆ ತೀವ್ರ ತೊಂದರೆ..!
–ಇದು ಇಲ್ಲಿನ ರಾಯದುರ್ಗ ರಸ್ತೆಯಲ್ಲಿನ ಪಲ್ಲಳ್ಳಿ ತಿಮ್ಮಪ್ಪ ಬಡಾವಣೆ ಚಿತ್ರಣ. ಕಂಡುಬಂದಿದ್ದು ಭಾನುವಾರ ನಾಗರಿಕ ಹಿತರಕ್ಷಣಾ ಸದಸ್ಯರು ಬಡಾವಣೆಗೆ ಭೇಟಿ ನೀಡಿದ ವೇಳೆ.
ಬಡಾವಣೆಯಲ್ಲಿ ಮನೆಗಳನ್ನು ನಿರ್ಮಿಸಿ 15 ವರ್ಷಗಳಾಗಿವೆ. ಮನೆ ಇದ್ದವರಿಗೆ ಹಾಗೂ ಅವೈಜ್ಞಾನಿಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿರುವ ಪರಿಣಾಮ 250 ಮನೆಗಳ ಪೈಕಿ 40–45 ಮನೆಗಳಲ್ಲಿ ಮಾತ್ರ ವಾಸ ಮಾಡುತ್ತಿದ್ದು ಉಳಿಕೆ ಮನೆಗಳು ವ್ಯರ್ಥವಾಗುತ್ತಿವೆ. ಅನೇಕ ಮನೆಗಳ ಕಿಟಕಿ, ಬಾಗಿಲು ಕಿತ್ತು ಹೋಗಿದ್ದು ಹಂದಿ, ನಾಯಿಗಳ ವಾಸಸ್ಥಳವಾಗಿ ಮಾರ್ಪಟ್ಟಿವೆ. ಇಂತಹ ಮನೆಗಳನ್ನು ಗುರುತಿಸಿ, ನಿಜವಾದ ಫಲಾನುಭವಿಗಳಿಗೆ ನೀಡಿ ಎಂದು ಮನವಿಗಳನ್ನು ಮಾಡಿದ್ದರೂ ಪಟ್ಟಣ ಪಂಚಾಯ್ತಿ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ನಿವಾಸಿಗಳು ದೂರಿದರು.
ಬಡಾವಣೆಯಲ್ಲಿ ಎರಡು ನಲ್ಲಿಗಳು ಮಾತ್ರ ಇವೆ, ಮೂರು ಬೀದಿದೀಪಗಳು ಉರಿಯುತ್ತವೆ, ಬಡಾವಣೆ ಗುಡ್ಡದ ತಪ್ಪಲಿನಲ್ಲಿ ಇರುವ ಕಾರಣ ರಾತ್ರಿ ವೇಳೆ ವಿಷಜಂತು, ಪ್ರಾಣಿಗಳ ಹಾವಳಿ ಭಯದಿಂದ ಬಳಲುತ್ತಿದೆ. ಆದ್ದರಿಂದ ಕೂಡಲೇ ಬೀದಿದೀಪ ಹಾಕಿಸಬೇಕು. ಬಡಾವಣೆಗೆ ಅಂಟಿಕೊಂಡು ಸ್ಮಶಾನ ವಿದ್ದು ಅಲ್ಲಿ ಶವಗಳನ್ನು ಸುಡುವಾಗ ಬರುವ ದುರ್ವಾಸನೆ ಬಡಾವಣೆ ತುಂಬಾ ಆವರಿಸುತ್ತದೆ. ಈ ಕಾರಣಕ್ಕಾಗಿಯೇ ಅನೇಕರು ಇಲ್ಲಿ ವಾಸ ಮಾಡಲು ಇಷ್ಟಪಡುತ್ತಿಲ್ಲ. ಈ ಸಮಸ್ಯೆ ಬಗೆಹರಿಸಬೇಕು ಎಂದು ನಿವಾಸಿಗಳಾದ ರಂಗಪ್ಪ, ಮಲ್ಲಿಕಾರ್ಜುನ, ಗೋವಿಂದ ನಾಯಕ ಒತ್ತಾಯಿಸಿದರು.
ಹಿತರಕ್ಷಣಾ ಸಮಿತಿಯ ಈಶ್ವರಪ್ಪ ಮಾತನಾಡಿ, ಬಡಾವಣೆ ನಿವೇಶನ ಹಕ್ಕುಪತ್ರ ನೀಡುವಾಗ ಅದರಲ್ಲಿ ಫಲಾನುಭವಿ ಹೆಸರು ಮಾತ್ರ ಬರೆಯಲಾಗಿದೆ. ಚೆಕ್ ಬಂದಿ, ಅಳತೆ, ದಿನಾಂಕ ನಮೂದಿಸಿಲ್ಲ. ಇದರಿಂದ ಮುಂದೆ ಸಾಕಷ್ಟು ಕಾನೂನು ಸಮಸ್ಯೆ ಎದುರಿಸಬೇಕಿದೆ. ಅಗತ್ಯ ಇಲ್ಲದವರಿಗೆ ನಿವೇಶನ ನೀಡಿದ್ದೇ ಬಡಾವಣೆ ವ್ಯರ್ಥ ವಾಗಲು ಮುಖ್ಯ ಕಾರಣ ಎಂದರು.
ಹಾಜರಿದ್ದ ಪಟ್ಟಣ ಪಂಚಾಯ್ತಿ ಸದಸ್ಯ ಬಸವರಾಜ್ ಮಾತನಾಡಿ, ಈಗಾಗಗೇ ಬಡಾವಣೆಯಲ್ಲಿ ಬೀದಿದೀಪ, ಚರಂಡಿ ದುರಸ್ತಿಗಾಗಿ ಬೇಡಿಕೆ ಸಲ್ಲಿಸಿದ್ದು ಶೀಘ್ರವೇ ಅನುಷ್ಠಾನವಾಗಲಿವೆ ಎಂದು ಭರವಸೆ ನೀಡಿದರು.
ಜನಸಂಸ್ಥಾನ ಸಂಸ್ಥೆ ಕಾರ್ಯದರ್ಶಿ ವಿರೂಪಾಕ್ಷಪ್ಪ, ಮಲ್ಲಿಕಾರ್ಜುನ, ಕೆ.ಆರ್. ಮಲ್ಲಿಕಾರ್ಜುನ್, ಸಂತೋಷ್, ರವೀಂದ್ರನಾಥ್, ಜ್ಞಾನದೇವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.