ADVERTISEMENT

ಶಿಕ್ಷಕರಿಗೆ ಶಿಸ್ತು, ಶ್ರಮ ಮುಖ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 6:35 IST
Last Updated 22 ಜನವರಿ 2011, 6:35 IST

ಚಿತ್ರದುರ್ಗ: ಶಿಕ್ಷಣದೊಟ್ಟಿಗೆ ದೇಶದ ಏಕತೆ, ಉನ್ನತಿಗಾಗಿ ಶ್ರಮಿಸುವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಮುಖ್ಯ ಎಂದು ಶಿಕ್ಷಕರ ಸರಕಾರಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಕಟಕದೋಂಡ ಶಿಕ್ಷಕರಿಗೆ ಕರೆ ನೀಡಿದರು.

ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬಾಪೂಜಿ ಡಿ.ಇಡಿ. ಕಾಲೇಜು ಸಂಯುಕ್ತವಾಗಿ ಆಯೋಜಿಸಿರುವ ಡಿ.ಇಡಿ. ಕಾಲೇಜುಗಳ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಶುಕ್ರವಾರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳು ಶಿಕ್ಷಕರನ್ನು ಅನುಸರಿಸುತ್ತಾರೆ. ಆದ್ದರಿಂದ ಶಿಕ್ಷಕರು ಸಮಾಜದಲ್ಲಿ ಜವಾಬ್ಧಾರಿಯಿಂದ ನಡೆದುಕೊಳ್ಳಬೇಕು. ನಾವಿರುವುದು ಸಮಾಜಕ್ಕಾಗಿ ಎಂಬ ಭಾವನೆ ಮಕ್ಕಳಲ್ಲಿ ಬೆಳೆಯುವಂತೆ ಮಾಡಬೇಕು. ಬದುಕಿನಲ್ಲಿ ಶಿಕ್ಷಣ ಒಂದು ಭಾಗವಾದರೆ, ಶಿಸ್ತು ಮತ್ತೊಂದು ಭಾಗ. ಶಿಕ್ಷಕರು ಶಿಸ್ತು, ಶ್ರಮ, ಕರ್ತವ್ಯ ಈ ಮೂರು ಅಂಶವನ್ನು ಸಮನಾಗಿ  ಬದುಕಿನಲ್ಲಿ ಅಳವಡಿಸಿಕೊಂಡು ಮಕ್ಕಳಲ್ಲೂ ಬೆಳೆಸಬೇಕು ಎಂದು ಸಲಹೆ ನೀಡಿದರು.

ಯುವಜನತೆ ಈ ನಾಡಿನ ಶಕ್ತಿಯಾದರೆ, ಶಿಕ್ಷಕರು ದೇಶದ ಬೆನ್ನೆಲುಬು. ಭವಿಷ್ಯದ ನಾಗರಿಕರನ್ನು ಸೃಷ್ಟಿ ಮಾಡುವ ಮಹತ್ತರ ಹೊಣೆ ಶಿಕ್ಷಕರ ಮೇಲಿದೆ. ಕೇವಲ ಶಿಕ್ಷಣ ನೀಡುವುದರಿಂದ ಜವಾಬ್ದಾರಿ ಮುಗಿಯುವುದಿಲ್ಲ. ಶಿಸ್ತು, ಉತ್ತಮ ನಡವಳಿಕೆ, ಧನಾತ್ಮಕ ಚಿಂತನೆಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು.

ಡಿಡಿಪಿಐ ಕೆ.ಶಂಕರಪ್ಪ ಮಾತನಾಡಿ, ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರುವ ಸರಕಾರ ಹಲವು ಸೌಲಭ್ಯಗಳು, ನೂತನ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಅನುಷ್ಠಾನದಲ್ಲಿ ನಾವು ವಿಫಲವಾಗುತ್ತಿದ್ದೇವೆ. ಈ ಬಗ್ಗೆ ಚಿಂತನೆ ಅಗತ್ಯ ಎಂದರು.

ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಂ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಪ್ರಾಚಾರ್ಯ ಎಂ. ಮಲಣ್ಲ್ಣ , ಇಸ್ಮಾಯಿಲ್, ಹನುಮಂತರಾಯ, ಶೋಭಾರಾಣಿ, ಪ್ರಾಚಾರ್ಯ ಬಿದರಹಳ್ಳಿ ಕೃಷ್ಣಮೂರ್ತಿ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.