ADVERTISEMENT

ಶಿಕ್ಷಣದಿಂದ ಪರಿಪೂರ್ಣತೆ ರೂಪಿಸಿಕೊಳ್ಳಲು ಕರೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 6:35 IST
Last Updated 23 ಸೆಪ್ಟೆಂಬರ್ 2011, 6:35 IST
ಶಿಕ್ಷಣದಿಂದ ಪರಿಪೂರ್ಣತೆ ರೂಪಿಸಿಕೊಳ್ಳಲು ಕರೆ
ಶಿಕ್ಷಣದಿಂದ ಪರಿಪೂರ್ಣತೆ ರೂಪಿಸಿಕೊಳ್ಳಲು ಕರೆ   

ಹಿರಿಯೂರು: ಹೆಣ್ಣುಮಕ್ಕಳಿಗೆ ಕಲಿಕೆ ಅನಿವಾರ್ಯ. ವಿದ್ಯೆ ಪಡೆಯುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಗಿರೀಶ ವೀರಶೈವ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ಎಂ.ಎನ್. ಸೌಭಾಗ್ಯವತಿ ದೇವರು ಕರೆ ನೀಡಿದರು.

ನಗರದ ಗಿರೀಶ ಬಾಲಕಿಯರ ಪಿಯು ಕಾಲೇಜಿನಲ್ಲಿ ಗುರುವಾರ ಕ್ರೀಡಾ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾವಂತ ಹೆಣ್ಣು ತನ್ನ ಕುಟುಂಬದ ಜತೆಗೆ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಬಲ್ಲಳು. ತಮ್ಮಲ್ಲಿರುವ ಪ್ರತಿಭೆಯ ಮೂಲಕ ಗಣನೀಯ ಸಾಧನೆ ಮಾಡಿ ಎಂದು ಅವರು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಟಿ. ತ್ರಿಯಂಭಕಮೂರ್ತಿ ಮಾತನಾಡಿ, ಕಾಲೇಜಿನಲ್ಲಿ ಚುನಾವಣೆ ಮೂಲಕ ವಿದ್ಯಾರ್ಥಿ ಸಂಘ ಅಸ್ಥಿತ್ವಕ್ಕೆ ಬಂದಿರುವುದು ವಿಶೇಷ. ಚುನಾವಣಾ ಪದ್ಧತಿ ಬಗ್ಗೆ ತಿಳಿಯಲು, ನೇರವಾಗಿ ಪಾಲ್ಗೊಳ್ಳಲು ಇದರಿಂದ ಸಹಕಾರಿಯಾಗಿದೆ. ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಗೌರವ ನೀಡುತ್ತಾ ಬರಲಾಗಿದೆ.

ಆದರೂ, ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನೂ ನಿಂತಿಲ್ಲ. ಬದುಕಿನಲ್ಲಿ ಬರುವ ಎಲ್ಲಾ ಸಮಸ್ಯೆ ಹಾಗೂ ಸ್ಪರ್ಧೆಗಳನ್ನು ಆತ್ಮ ವಿಶ್ವಾಸದಿಂದ ಎದುರಿಸಬೇಕು. ಪರಿಶ್ರಮವಿದ್ದಲ್ಲಿ ಫಲಿತಾಂಶ ಸಿಕ್ಕೇ ಸಿಗುತ್ತದೆ. ಮಾಡುವ ಕೆಲಸ ಯೋಜನಾ ಬದ್ಧವಾಗಿರಲಿ. ಆಲೋಚನೆಗಳು ಭಿನ್ನವಾಗಿರಲಿ ಎಂದು ತಿಳಿಸಿದರು.

ಗಿರೀಶ ಬಿಇಡಿ ಕಾಲೇಜಿನ ಪ್ರಾಂಶುಪಾಲರಾದ ಎಂ.ಎ. ಸುಧಾ ಮಾತನಾಡಿ, ಪ್ರತಿಭಾ ಪ್ರದರ್ಶನ ಮಾಡಲು ವಿದ್ಯಾರ್ಥಿನಿಯರಿಗೆ ಸಿಗುವ ಅವಕಾಶಗಳು ಕಡಿಮೆ. ತಮ್ಮಲ್ಲಿರುವ ಕಲಾತ್ಮಕತೆಯನ್ನು ಹೊರಹಾಕಲು ವಿದ್ಯಾರ್ಥಿ ಸಂಘಗಳು ಉತ್ತಮ ವೇದಿಕೆಯಾಗಿವೆ. ಪಠ್ಯದ ಸಾಧನೆಯಷ್ಟೇ ಸಾಧನೆ ಎಂಬ ಗುಂಗಿನಿಂದ ಹೊರಬಂದು, ಪ್ರತಿಭೆಯನ್ನು ಪ್ರದರ್ಶಿಸಿ ಎಂದು ಕರೆ ನೀಡಿದರು.

 ಪ್ರಾಂಶುಪಾಲ ವಿ.ಟಿ. ಮಂಜುನಾಥ್ ಮಾತನಾಡಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಮೂಲಕ ತಮ್ಮಲ್ಲಿರುವ ಬಹುಮುಖ ವ್ಯಕ್ತಿತ್ವವನ್ನು ಸಮಾಜಕ್ಕೆ ಪರಿಚಯಿಸಿ ಎಂದು ಹೇಳಿದರು.

ಗೌಸಿಯಾ ಅಮ್ಮಾಜಿ ಮಾತನಾಡಿದರು. ಉಪ ಪ್ರಾಂಶುಪಾಲ ಎಂ.ಆರ್. ಮಲ್ಲಿಕಾರ್ಜುನಯ್ಯ ಹಾಜರಿದ್ದರು. ಕೆ.ಎಂ. ವಿನುತಾ ಸ್ವಾಗತಿಸಿದರು. ರಕ್ಷಿತಾ ವಂದಿಸಿದರು. ಎಂ.ಜಿ.ಆರ್. ದಾಮಿನಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.