ADVERTISEMENT

`ಸರಳ ಬದುಕಿನ ಆದರ್ಶ ಜೀವಿ'

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 9:55 IST
Last Updated 6 ಏಪ್ರಿಲ್ 2013, 9:55 IST

ಹಿರಿಯೂರು: ಬೆಳಗೆರೆ ಕೃಷ್ಣಶಾಸ್ತ್ರಿಗಳು ಆದರ್ಶ ಜೀವಿ. ಬರೆದಂತೆ ಬದುಕಿ ತೋರಿಸಿದ ಮಹಾನ್ ಚೇತನ. ಅವರ ಬದುಕು-ಬರಹ ಎರಡೂ ಇಂದಿನ ಪೀಳಿಗೆಯವರಿಗೆ ಆದರ್ಶವಾಗಬೇಕು ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ ಹೇಳಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನರಾಂ ಜಯಂತಿ, `ಜಾನಪದ ಸಿರಿ ಸಿರಿಯಜ್ಜಿ-ಒಂದು ಚಿಂತನೆ' ಹಾಗೂ `ಬೆಳಗೆರೆ ಕೃಷ್ಣಶಾಸ್ತ್ರಿಗಳ ಸಾಹಿತ್ಯ ಮತ್ತು ಬದುಕು' ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸ್ತ್ರಿಗಳ `ಹಳ್ಳಿಚಿತ್ರ' ನಾಟಕ ಗ್ರಾಮೀಣ ಬದುಕಿನ ಎಲ್ಲ ಮಜಲುಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಹೀಗಾಗಿ ಈ ಭಾಗದಲ್ಲಿ ಸಾವಿರಾರು ಪ್ರದರ್ಶನಗಳನ್ನು ನಾಟಕ ಕಂಡಿದೆ. ಶಾಸ್ತ್ರಿಗಳು ನಡೆದಾಡುವ ವಿಶ್ವಕೋಶವಿದ್ದಂತೆ. ಬೆಳಗೆರೆಯಂತಹ ಕುಗ್ರಾಮದಲ್ಲಿ ಶಾಲೆ ತೆರೆದು, ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿ, ನಾಡಿನಾದ್ಯಂತ ಹೆಸರು ಪಡೆಯುವಂತೆ ಮಾಡಿದ ಸಾಧಕ ಅವರು ಎಂದು ತಿಪ್ಪಣ್ಣ ತಿಳಿಸಿದರು.

`ಸಿರಿಯಜ್ಜಿ' ಕುರಿತು ಮಾತನಾಡಿದ, ದಾವಣಗೆರೆ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕ ಡಾ. ಮಂಜಣ್ಣ ಅವರು `ಸಾವಿರ ಸಿರಿ ಬೆಳಕು' ಮತ್ತು `ಬುಡಕಟ್ಟಿನ ಗೀತೆಗಳು' ಕೃತಿಗಳಲ್ಲಿ ಅಜ್ಜಿಯ ಪ್ರತಿಭೆಯ ಅನಾವರಣವಾಗಿದೆ. ಕೃಷ್ಣಮೂರ್ತಿ ಹನೂರು ಮತ್ತು ಬೆಳಗೆರೆ ಕೃಷ್ಣಶಾಸ್ತ್ರಿಗಳು ಅಜ್ಜಿಯನ್ನು ಜಾನಪದ ಲೋಕಕ್ಕೆ ಪರಿಚಯಿಸಿದರು. ಬರಗೂರರ `ಜಾನಪದ' ಚಿತ್ರದಲ್ಲಿ ಅತಿಥಿ ಕಲಾವಿದೆಯಾಗಿ ಅಜ್ಜಿ ಅಭಿನಯಿಸಿದೆ ಎಂದು ವಿವರಿಸಿದರು.

ಪ್ರಾಧ್ಯಾಪಕ ಆರ್.ಟಿ. ಕೀರ್ತಿಕುಮಾರ್ ಜಗಜೀವನರಾಂ ಬಗ್ಗೆ ಮಾತನಾಡಿದರು. ಪ್ರಾಂಶುಪಾಲ ಡಾ.ಸಿ. ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಎಚ್.ಆರ್. ರಂಗಲಕ್ಷ್ಮಮ್ಮ, ಜಿ. ರಾಜಶೇಖರಯ್ಯ, ಡಿ. ಧರಣೇಂದ್ರಯ್ಯ, ದೊಡ್ಡಬಸಪ್ಪ, ಬಿ.ಎಸ್. ರಾಘವೇಂದ್ರ, ಎಸ್.ಜಿ. ರಂಗಸ್ವಾಮಿ ಸಕ್ಕರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.