ADVERTISEMENT

ಸರ್ಕಾರಿ ಶಾಲೆ: ಗುಣಮಟ್ಟ ಕಾಪಾಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 8:50 IST
Last Updated 17 ಆಗಸ್ಟ್ 2012, 8:50 IST

ಚಿತ್ರದುರ್ಗ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ಶ್ರಮಿಸಬೇಕೆಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಸೂಚಿಸಿದರು.

ನಗರ ಸಮೀಪದ ಪಿಳ್ಳೆಕೇರನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾ ಕೊಠಡಿಗಳನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣಕ್ಕಾಗಿ ಸರ್ಕಾರ ಎಲ್ಲ ಸೌಲಭ್ಯ, ಸವಲತ್ತು ಒದಗಿಸುತ್ತಿದೆ. ಉತ್ತಮ ಶಿಕ್ಷಣ ನೀಡುವುದು  ಶಿಕ್ಷಕರ ಕರ್ತವ್ಯವಾಗಿರುತ್ತದೆ. ಖಾಸಗಿ ಶಾಲೆಗಳಲ್ಲಿ ನೀಡುವ ಶಿಕ್ಷಣದ ಮಾದರಿಯಂತೆ ಸರ್ಕಾರಿ ಶಾಲೆಗಳಲ್ಲಿ ಇನ್ನೂ ಹೆಚ್ಚಿನಮಟ್ಟದಲ್ಲಿ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

ADVERTISEMENT

ಶಿಕ್ಷಕರು ಶಿಕ್ಷಣದ ಮಹತ್ವವನ್ನು ಅರಿತು ಕೆಲಸ ಮಾಡಬೇಕು. ಮಕ್ಕಳಿಗೆ ನಿಷ್ಠೆಯಿಂದ ಬದ್ಧತೆಯಿಂದ ಪಾಠ ಪ್ರವಚನಗಳನ್ನು ಹೇಳಿಕೊಡಬೇಕು. ಅವರಲ್ಲಿ ದೇಶಪ್ರೇಮ, ದೇಶಭಕ್ತಿ ಬೆಳೆಸುವ ಮೂಲಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಶಕ್ತಿ ಬೆಳೆಸಬೇಕು ಎಂದು ತಿಳಿಸಿದರು.

 ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಪಿಳ್ಳೆಕೇರನಹಳ್ಳಿಯಲ್ಲಿ ಶಾಲಾ ಕೊಠಡಿಗಳ ಬೇಡಿಕೆಯಂತೆ ನಾಲ್ಕು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರಕೃತಿ ವಿಕೋಪಕ್ಕೆ ಒಳಗಾದಂತಹ ಸಂದರ್ಭದಲ್ಲಿ ಕೆರೆಯ ಕೋಡಿನೀರು ಶಾಲಾ ಆವರಣಕ್ಕೆ ಬಂದು ತೊಂದರೆಯಾಗಿತ್ತು. ಈಗ ಶಾಲಾ ಆವರಣದ ಸುತ್ತಲೂ ಕಾಂಪೌಂಡ್ ನಿರ್ಮಿಸಿರುವುದು ಉತ್ತಮ ಕೆಲಸ ಎಂದರು.

ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಈ ಗ್ರಾಮದಲ್ಲಿ ಬಡ ಮಕ್ಕಳು ಶಾಲೆಗೆ ಬಂದಿದ್ದು, ಮಕ್ಕಳಿಗೆ ಯಾವುದೇ ವಂಚನೆ ಇಲ್ಲದೇ ಪಾಠ ಮಾಡಬೇಕು. ಖಾಸಗಿ ಶಾಲೆಗಳ ಸ್ಪರ್ಧೆ ಇರುವಂತಹ ಈ ದಿನಗಳಲ್ಲಿ ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಾಮರ್ಥ್ಯತೆ ಹೊಂದಬೇಕು. ಈ ಬಗ್ಗೆ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಶಿಕ್ಷಕರು ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿದರು.

ಸಂಸತ್ ಸದಸ್ಯ ಜನಾರ್ದನಸ್ವಾಮಿ, ಜಿ.ಪಂ. ಅಧ್ಯಕ್ಷ ಟಿ. ರವಿಕುಮಾರ್, ಉಪಾಧ್ಯಕ್ಷೆ  ಭಾರತಿ ಕಲ್ಲೇಶ್, ನಗರಸಭೆ ಅಧ್ಯಕ್ಷೆ  ಸುನಿತಾ ಮಲ್ಲಿಕಾರ್ಜುನ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ರಂಗಸ್ವಾಮಿ, ಚಂದ್ರಪ್ಪ, ಡಿಡಿಪಿಐ ಮಂಜುನಾಥ್, ಮಲ್ಲಣ್ಣ, ರವಿಶಂಕರ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.