ADVERTISEMENT

ಸಿಎಂ ಜತೆ ಚರ್ಚಿಸಿ ಪರಿಹಾರ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 9:30 IST
Last Updated 7 ಜನವರಿ 2012, 9:30 IST

ಹಿರಿಯೂರು: ಇಲ್ಲಿನ ವಾಣಿ ಸಕ್ಕರೆ ಕಾರ್ಖಾನೆ ಸಿಬ್ಬಂದಿಗೆ ಪಾವತಿಸಬೇಕಿರುವ ಬಾಕಿ ಹಣದ ವಿಚಾರ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿ, ಸಮಸ್ಯೆ ಪರಿಹರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ಮಾರ್ಗದಲ್ಲಿ ಶುಕ್ರವಾರ ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಸ್ವಲ್ಪ ಸಮಯ ತಂಗಿದ್ದ ಅವರನ್ನು ಪಕ್ಷದ ಮುಖಂಡರು ಭೇಟಿ ಮಾಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗ, ಈ ಭರವಸೆ ನೀಡಿದರು.

ಸಕ್ಕರೆ ಕಾರ್ಖಾನೆಯ 400 ಹೆಚ್ಚು ಕುಟುಂಬಗಳು ಕಾರ್ಖಾನೆ ಸಮಾಪನಗೊಂಡ ನಂತರ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಕಾನೂನು ರೀತ್ಯ ಅವರಿಗೆ ಬರಬೇಕಿರುವ ಬಾಕಿ ಹಣವನ್ನು ಪಡೆಯಲು ನಿರಂತರ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ತಾಲ್ಲೂಕಿನಲ್ಲಿ ಬಿಜೆಪಿಗೆ ಭದ್ರ ನೆಲೆಯಿಲ್ಲ. ಹೀಗಾಗಿ ಸಕ್ಕರೆ ಕಾರ್ಖಾನೆ ಸಮಸ್ಯೆ, ವಾಣಿ ವಿಲಾಸ ಜಲಾಶಯಕ್ಕೆ ನೀರು ಪೂರೈಕೆ, ಧರ್ಮಪುರ ಕೆರೆಗೆ ಪೂರಕ ನಾಲೆ, ಗಾಯತ್ರಿ ಜಲಾಶಯದ ಪುನಶ್ಚೇತನ ಮೊದಲಾದ ದಶಕಗಳ ಸಮಸ್ಯೆಗಳನ್ನು ಪರಿಹರಿಸಿದರೆ, ಸಾರ್ವಜನಿಕರಿಗೆ ಪಕ್ಷದ ಬಗ್ಗೆ ಒಲವು ಮೂಡುತ್ತದೆ ಎಂದು ಮುಖಂಡರು ತಿಳಿಸಿದರು.

ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮೊದಲು ಕಾರ್ಮಿಕರ ಸಮಸ್ಯೆಗೆ ಆದ್ಯತೆ ಕೊಡೋಣ. ಬೆಂಗಳೂರು- ಶಿವಮೊಗ್ಗ ರಸ್ತೆ ಹದಗೆಟ್ಟಿರುವ ಕಾರಣ ಸದ್ಯಕ್ಕೆ ಈ ಮಾರ್ಗದಲ್ಲಿ ಬಂದು ಹೋಗುತ್ತೇನೆ. ಮುಖಂಡರು, ಪಕ್ಷದ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

ವಾಣಿ ವಿಲಾಸ ಜಲಾಶಯದ ನೀರಾವರಿ ಸಲಹಾ ಸಮಿತಿ ರಚನೆ ಯಾವಾಗ ಮಾಡಿದ್ದೆಂದು ತಿಳಿದಿಲ್ಲ. ಅದನ್ನು ಬದಲಾಯಿಸಬೇಕು ಎಂದು ಮುಖಂಡರು ಮಾಡಿದ ಮನವಿಗೆ ದೂರವಾಣಿ ಮೂಲಕ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ, ನೂತನ ಸಮಿತಿ ರಚಿಸುವಂತೆ ಸೂಚಿಸಿದರು.

ಸ್ಥಳೀಯ ಮುಖಂಡರೊಬ್ಬರಿಗೆ ಯಾವುದಾದರೂ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನ ನೀಡಿದರೆ, ಪಕ್ಷವನ್ನು ಸದೃಢಗೊಳಿಸಲು ಅನುಕೂಲವಾಗುತ್ತದೆ ಎಂದು ಕಾರ್ಯಕರ್ತರು ಕೋರಿದರು. ಈ ಸಂದರ್ಭದಲ್ಲಿ ಮುಖಂಡರಾದ ಜಿ. ಸೋಮಶೇಖರ್, ವೈ.ಎಸ್. ಅಶ್ವತ್ಥಕುಮಾರ್, ಎಂ.ಎಸ್. ರಾಘವೇಂದ್ರ, ಬಿ.ಆರ್. ರಂಗಸ್ವಾಮಿ, ಎಂ.ವಿ. ಹರ್ಷ, ಶರವಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.