ADVERTISEMENT

ಸೇವಾಲಾಲ್ ಜ್ಯೋತಿ ಯಾತ್ರೆಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:00 IST
Last Updated 5 ಫೆಬ್ರುವರಿ 2011, 7:00 IST


ಹೊಸದುರ್ಗ: ಸಂತ ಸೇವಾಲಾಲ್ ಜಯಂತ್ಯುತ್ಸವದ ಅಂಗವಾಗಿ ಜನಜಾಗೃತಿ ಮೂಡಿಸಲು ದಾವಣಗೆರೆ ಜಿಲ್ಲೆ ಶಾಂತಿಸಾಗರದಿಂದ ಆರಂಭಗೊಂಡು ಶುಕ್ರವಾರ ಪಟ್ಟಣಕ್ಕೆ ಆಗಮಿಸಿದ ಸೇವಾಲಾಲ್ ಜ್ಯೋತಿ ಯಾತ್ರೆಗೆ ಶುಕ್ರವಾರ ವಿಜೃಂಭಣೆಯ ಸ್ವಾಗತ ನೀಡಲಾಯಿತು.ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗ ಜ್ಯೋತಿ ಯಾತ್ರೆಗೆ ಪೂರ್ಣಕುಂಭ ಸ್ವಾಗತ ನೀಡಿದ ತಾಲ್ಲೂಕು ಬಂಜಾರ ಸಮಾಜದವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು.ನಾಸಿಕ್ ಡೋಲ್, ವೀರಗಾಸೆ ಮತ್ತಿತರೆ ಜಾನಪದ ಕಲಾಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ನಡೆದ ಸೇವಾಲಾಲ್ ಜ್ಯೋತಿ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಉಡುಪು ತೊಟ್ಟ ಬಂಜಾರ ಮಹಿಳೆಯರು ಹಾಗೂ ನೂರಾರು ಸಂಖ್ಯೆಯಲ್ಲಿದ್ದ ಜನರು ಪಾಲ್ಗೊಂಡಿದ್ದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಯಾಲಕ್ಕಪ್ಪನಹಟ್ಟಿ ಬಳಿ ಜ್ಯೋತಿ ಯಾತ್ರೆಯನ್ನು ಹೊಳಲ್ಕೆರೆಗೆ ಬೀಳ್ಕೊಡಲಾಯಿತು.
ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕು ಸೂರಗೊಂಡನಕೊಪ್ಪದಲ್ಲಿ ನಡೆಯಲಿರುವ ಸೇವಾಲಾಲ್ ಜಯಂತ್ಯುತ್ಸವದ ಜನಜಾಗೃತಿಗಾಗಿ ಆಯೋಜಿಸಲಾಗಿರುವ ಜ್ಯೋತಿ ಯಾತ್ರೆಯಲ್ಲಿ
ಸರ್ದಾರ್ ಸೇವಾಲಾಲ್ ಸ್ವಾಮೀಜಿ, ತಾಲ್ಲೂಕು ಬಂಜಾರ ಸಮಾಜದ ಮುಖಂಡರಾದ ಕೃಷ್ಣನಾಯಕ್, ಡಾ.ಜಯರಾಂ ನಾಯಕ್,  ತಿರುಪತಿ ನಾಯಕ್  ಮತ್ತಿತರರು ಭಾಗವಹಿಸಿದ್ದರು.

ಇಂದು ರಸಪ್ರಶ್ನೆ ಸ್ಪರ್ಧೆ
ಚಿತ್ರದುರ್ಗ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಫೆ. 5ರಂದು ಆಯೋಜಿಸಲಾಗಿದೆ.ಸಂಜೆ 4ಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಆರ್. ಮಲ್ಲಿಕಾರ್ಜುನಯ್ಯ, ಎಸ್.ಕೆ.ಬಿ. ಪ್ರಸಾದ್, ಚಳ್ಳಕೆರೆ ಯರ್ರಿಸ್ವಾಮಿ, ಕೆ. ರವಿಶಂಕರರೆಡ್ಡಿ, ಎನ್.ಆರ್. ತಿಪ್ಪೇಸ್ವಾಮಿ, ಈ. ರುದ್ರಮುನಿ, ಆರ್.ಕೆ. ಕೇದಾರನಾಥ್ ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಸಂಚಾಲಕ ಎಂ.ಡಿ. ಲತೀಫ್‌ಸಾಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.