ADVERTISEMENT

ಸ್ವಯಂನಿವೃತ್ತಿ ಯೋಜನೆ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 5:20 IST
Last Updated 3 ಅಕ್ಟೋಬರ್ 2011, 5:20 IST

ಮೊಳಕಾಲ್ಮುರು: ಕೇಂದ್ರ ಸರ್ಕಾರ ನೂತನವಾಗಿ ಬಿಎಸ್‌ಎನ್‌ಎಲ್ ನೌಕರರಿಗೆ ಜಾರಿಗೆ ತರಲು ಹೊರಟಿರುವ ಸ್ವಯಂನಿವೃತ್ತಿ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘದ ರಾಜ್ಯ ವಲಯ ಕಾರ್ಯದರ್ಶಿ ಕೆ.ಎಸ್. ಶೇಷಾದ್ರಿ ಆಗ್ರಹಿಸಿದರು.

ಇಲ್ಲಿನ ಗುರುಭವನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ದೂರವಾಣಿ ನೌಕರರ ಒಕ್ಕೂಟದ ಐದನೇ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಒಂದು ಲಕ್ಷ ಬಿಎಸ್‌ಎನ್‌ಎಲ್ ನೌಕರರನ್ನು ಕಡ್ಡಾಯ ನಿವೃತ್ತಿ ಗೊಳಿಸಬೇಕು ಎಂದು `ಸ್ಯಾಮ್‌ಪಿತ್ರೋಡಾ~ ಸಮಿತಿ ವರದಿ ನೀಡಿದೆ. ವರದಿಯನ್ನು ಇಲಾಖೆ ಅ. 29ರಂದು ಅಂಗೀಕಾರ ಮಾಡಿದೆ. ನೌಕರರಿಗೆ ಮಾರಕವಾಗಿರುವ ಈ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಕಾರ್ಮಿಕರ ಸಂಘದಿಂದ ಪ್ರತಿಭಟನೆ ಮಾಡಿದರೂ ಸಹ ಜಾರಿಗೆ ಮುಂದಾಗಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಶೇ. 78.2ರಷ್ಟು ತುಟ್ಟಿಭತ್ಯೆಯನ್ನು ನೂತನ `ಐಡಿಎ~ ವೇತನ ಶ್ರೇಣಿಯಲ್ಲಿ ವಿಲೀನಗೊಳಿಸಬೇಕು, ಕಳೆದ ವರ್ಷದಿಂದ ತಡೆಹಿಡಿದಿರುವ ಉತ್ಪಾದನಾ ಆಧಾರಿತ ಬೋನಸ್‌ನೀಡುವ ಜತೆಗೆ ಇದನ್ನು ಪುನರ್ ಪರಿಶೀಲನೆ ಹಾಗೂ ನವೀಕರಣ ಮಾಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಪಿಐ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಟೇಲ್ ಜಿ. ಪಾಪನಾಯಕ, ಕಾರ್ಮಿಕ ವಿರೋಧಿ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕರ ಹಿತ ಕಾಪಾಡಲು ಮುಂದಾಗದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಸಹ ಪ್ರಬಂಧಕ ಕದರ ಮಂಡಲಗಿ, ಎಸ್‌ಟಿ, ಎಸ್‌ಟಿ ವಿಭಾಗದ ವಲಯ ಕಾರ್ಯದರ್ಶಿ ಕೆ. ಗಂಗಪ್ಪ, ಹಿರಿಯ ನಾಯಕ ಎಚ್. ಶಂಕರ ನಾರಾಯಣ, ಸಂಘದ ನಿರ್ದೇಶಕ ಎಚ್. ತಿಮ್ಮರಾಯಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.