ADVERTISEMENT

ಹಿಮಾಲಯದೆತ್ತರಕ್ಕೆ ಸಾಹಿತ್ಯ ಬೆಳೆಸಿದ ಕಾರಂತರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 9:30 IST
Last Updated 6 ಫೆಬ್ರುವರಿ 2012, 9:30 IST

ಚಿತ್ರದುರ್ಗ: ಬಹುಮುಖಿ ಪ್ರತಿಭೆ ಕಾರಂತರು, ಕಲೆ, ಸಂಸ್ಕೃತಿ, ಯಕ್ಷಗಾನದೊಂದಿಗೆ ಸಾಹಿತ್ಯವನ್ನು ಹಿಮಾಲಯದ ಎತ್ತರಕ್ಕೆ ಬೆಳೆಸಿದರು ಎಂದು ಹಿರಿಯ ಸಂಶೋಧಕ ಡಾ.ಶೆಟ್ಟರ್ ಬಣ್ಣಿಸಿದರು.

`ಅಭಿರುಚಿ~ ಸಾಹಿತ್ಯಕ ಸಾಂಸ್ಕೃತಿಕ ವೇದಿಕೆ, ಅಭಿನವ ಪ್ರಕಾಶನ ವತಿಯಿಂದ ನಗರದ ಐಎಂಎ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಿ. ಸೋಮಶೇಖರಯ್ಯ ವಿರಚಿತ `ಕಾರಂತರ ಜೀವಂತ ಪಾತ್ರಗಳು~ ಕೃತಿ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

50-70ರ ದಶಕದಲ್ಲಿ  ಸುತ್ತಲಿನ ಪರಿಸರವನ್ನು ಆಳವಾಗಿ ಅಭ್ಯಸಿಸಿ ಸೃಜನಾತ್ಮಕ ಸಾಹಿತ್ಯವನ್ನು ರಚಿಸುತ್ತಿದ್ದ ಕುವೆಂಪು, ದ.ರಾ.ಬೇಂದ್ರೆ, ಕಾರಂತರು ಸೇರಿದಂತೆ ಆ ಕಾಲದ ಸಾಹಿತಿಗಳು ಸಾಹಿತ್ಯವನ್ನು ಹಿಮಾಲಯದ ಎತ್ತರಕ್ಕೆ ಬೆಳೆಸಲು ಶ್ರಮಿಸಿದವರು ಎಂದರು.

ಶೈಕ್ಷಣಿಕವಾಗಿ ಪ್ರಗತಿ ಹೊಂದಿದ ಸಾಹಿತಿಗಳು ಓದುಗರ ಬಳಗ ಪಡೆದುಕೊಳ್ಳುವುದು ಸುಲಭ, ಆದರೆ ಶೈಕ್ಷಣಿಕವಾಗಿ ದೂರ ಉಳಿದ ಸಾಹಿತಿಗಳು ಓದುಗರನ್ನು ಸೃಷ್ಟಿಸುವುದು ತುಂಬಾ ಕಷ್ಟ ಎಂದರು.

ಒಂದು ಕಾಲದಲ್ಲಿ ಬಂಗಾಳಿ ಭಾಷೆಯ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಆರಾಧನಾ ಭಾವನೆಯಿಂದ ಕಾಣುತ್ತಿದ್ದೆವು. ನಂತರದ ದಿನಗಳಲ್ಲಿ ಅಂತಹ ಆರಾಧನೆ ಭಾವನೆ ನಮ್ಮ ಕನ್ನಡದ  ನವೋದಯದ ಕಾಲದಲ್ಲೂ ಮೂಡಿಬಂತು. ಕಾರಂತರು ಚಿತ್ರಿಸಿದ ಅನೇಕ ಪಾತ್ರಗಳು ಜೀವಂತಿಕೆ ಪಡೆಯುತ್ತವೆ ಎಂದು ಹೇಳಿದರು.

ಲೇಖಕ ಸಿ. ಸೋಮಶೇಖರಯ್ಯ ಮಾತನಾಡಿ, ಎಲ್ಲಾ ಭಾಷೆಗಳಿಗೆ ಮಾದರಿಯಾಗಿದ್ದ ಬಂಗಾಳಿ ಸಾಹಿತ್ಯದ ಸ್ಥಾನವನ್ನು ತುಂಬಿದ್ದು ಕನ್ನಡದ ಸಾಹಿತ್ಯ. ಅದಕ್ಕೆ  ಕಾರಣ ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿಯಂತಹ ಸಾಹಿತಿಗಳ ಸಾಹಿತ್ಯದ ಸತ್ವವೇ ಹಾಗಿತ್ತು ಎಂದು ತಿಳಿಸಿದರು.

ನವೋದಯ ಕಾಲದ ಸಾಹಿತ್ಯವನ್ನು ಗ್ರಾಮೀಣ ಪ್ರದೇಶದ ಜನರು ಸೇರಿದಂತೆ ಎಲ್ಲರೂ ಓದುತ್ತಿದ್ದರು ಆದರೆ ಇಂದಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳ ಹಾವಳಿಯಿಂದ ಸಾಹಿತ್ಯಕ್ಕೆ ಮಬ್ಬು ಕವಿದಿದೆ ಅದರ ಭ್ರಮನಿರಸನವಾದ ನಂತರ ಮತ್ತೆ ಸಾಹಿತ್ಯ ಲೋಕ ವಿಜೃಂಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕೃತಿ ಬಿಡುಗಡೆ ಮಾಡಿದ ಕವಿಯತ್ರಿ ತಾರಿಣಿ ಶುಭದಾಯಿನಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ದೇಸಿಯತೆಯನ್ನು ಶೋಧಿಕೊಳ್ಳುವ ನೆಲೆ ಕಂಡುಕೊಂಡಿದ್ದ ಕಾರಂತರ ಕಾದಂಬರಿಗಳಲ್ಲಿ ಸಂಪ್ರದಾಯವನ್ನು ಅತಿಯಾಗಿ ಮೀರಿದವರಲ್ಲ ಎಂದು ಹೇಳಿದರು.

`ಅಭಿನವ~ ಪ್ರಕಾಶನದ ನಾ. ರವಿಕುಮಾರ್, ಬಿ.ಪಿ. ವಿರೇಂದ್ರ ಕುಮಾರ್ ಇತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.