ADVERTISEMENT

ಹಿರಿಯೂರು: ಅರ್ಥಪೂರ್ಣ ಗಂಗಾಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2012, 5:20 IST
Last Updated 2 ಜೂನ್ 2012, 5:20 IST

ಹಿರಿಯೂರು: ತಾಲ್ಲೂಕಿನಲ್ಲಿ ಬೆಸ್ತರ ಜನಾಂಗಕ್ಕೆ ಸೇರಿದವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸರ್ಕಾರ ವಿಶೇಷ ಅನುದಾನ ನೀಡುವ ಮೂಲಕ ಬೆಸ್ತರ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಾಲ್ಲೂಕು ಗಂಗಾಂಬಿಕ ಬೆಸ್ತರ ಸಂಘದ ಅಧ್ಯಕ್ಷ ಡಿ. ಗಂಗಾಧರ್ ಒತ್ತಾಯಿಸಿದರು.

ನಗರದ ಸುಣ್ಣಗಾರರ ವೃತ್ತದ ತಾಲ್ಲೂಕು ಬೆಸ್ತರ ಸಂಘದಲ್ಲಿ ಶುಕ್ರವಾರ ಗಂಗಾ ಜಯಂತಿ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಸ್ತರು ಜೀವನೋಪಾಯಕ್ಕಾಗಿ ಆರೋಗ್ಯಕ್ಕೆ ಹಾನಿಕರವಾದ ಸುಣ್ಣ ಸುಡುವ ಕಾಯಕದಲ್ಲಿ ತೊಡಗಿದ್ದಾರೆ. ಬೆಸ್ತರು ಗೌರವಯುತ ಬದುಕು ನಡೆಸಲು ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಬ್ಯಾಂಕ್ ಅಥವಾ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಭದ್ರತಾ ರಹಿತ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಮರಗಾಲು ನಡಿಗೆಯಿಂದ ಕೂಡಿದ ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಸಂಘದ ಪ್ರಮುಖರಾದ ಶ್ರೀನಿವಾಸ್, ನರಸಿಂಹಮೂರ್ತಿ, ಎಲ್. ರಾಜಶೇಖರ್, ಗೋಪಿ ಇದ್ದರು.

ನಾಳೆ ಗುರುವಂದನೆ: ಪಾಲ್ಗೊಳ್ಳಲು ಕರೆ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಜೂನ್ 3ರಂದು ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಹಮ್ಮಿಕೊಂಡಿರುವ ಗುರುವಂದನ ಹಾಗೂ ಒಕ್ಕಲಿಗರ ಬೃಹತ್ ಸಮಾವೇಶದಲ್ಲಿ ತಾಲ್ಲೂಕಿನ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಾಲ್ಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಸಿ. ಹೊರಕೇರಪ್ಪ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಸದಾನಂದಗೌಡ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸ್ಫಟಿಕಪುರಿ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಲವು ಸಾಹಿತಿಗಳಿಗೆ, ಪ್ರಮುಖರಿಗೆ ಸನ್ಮಾನ ನಡೆಯಲಿದೆ. ತಾಲ್ಲೂಕಿನ ಜನರು ಪಾಲ್ಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.